ಕೋವಿಡ್ ನಿಯಮ ಉಲ್ಲಂಘಿಸಿ ಮದುವೆ – ಪೊಲೀಸರ ಕಾರಿನ ಮೇಲೆ ಕಲ್ಲು ತೂರಾಟ

Public TV
1 Min Read

ಚಿತ್ರದುರ್ಗ: ಕೋವಿಡ್ ನಿಯಮ ಉಲ್ಲಂಘಿಸಿ ಮದುವೆ ಮನೆ ಮೇಲೆ ದಾಳಿ ಮಾಡಿದ ಪೊಲೀಸರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಚಿತ್ರದುರ್ಗದ ತಾಲೂಕಿನ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯಾಲಹಾಳ್ ಗ್ರಾಮದಲ್ಲಿ ಕಲ್ಲು ತೂರಾಟ ನಡೆದಿದೆ.

ಬ್ಯಾಲಹಾಳ್ ಗ್ರಾಮದಲ್ಲಿ ಮಧು ಹಾಗು ಪೂಜಾ ಎಂಬವರ ವಿವಾಹ ನಡೆಯುತ್ತಿತ್ತು. ಸುಮಾರು 500 ಕ್ಕೂ ಹೆಚ್ಚು ಜನರನ್ನು ಸೇರಿಸಿ ಮದುವೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಸಹಾಯವಾಣಿಯ 112 ವಾಹನದಲ್ಲಿ ಪೊಲೀಸರು ದಾಳಿ ನಡೆಸಿ ಜನರನ್ನು ಗುಂಪು ಸೇರದಂತೆ ಚದುರಿಸಲು ಮುಂದಾಗಿದ್ದಾರೆ.

ಈ ನಡುವೆ ಅಲ್ಲೇ ಸೇರಿದ್ದ ಗ್ರಾಮಸ್ಥರ ಗುಂಪೊಂದು ಪೊಲೀಸರು ಹಾಗೂ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಲ್ಲಿ ಪೊಲೀಸ್ 112 ವಾಹನದ ಗಾಜು ಒಡೆದು ಜಖಂಗೊಂಡಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಚಿತ್ರದುರ್ಗ ಡಿವೈಎಸ್‍ಪಿ ಪಾಂಡುರಂಗ ಹಾಗೂ ಭರಮಸಾಗರ ಪೊಲೀಸ್ ಠಾಣೆ ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವರನ ಸಹೋದರನನ್ನು ಬಂಧಿಸಲಾಗಿದ್ದು, ವಧು-ವರನ ಮೇಲೂ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *