ಕೋವಿಡ್‍ಗೆ ಬಲಿಯಾದ ವಕೀಲರಿಗೆ ಸರ್ಕಾರ ಪರಿಹಾರ ನೀಡಬೇಕು: ಬಾಲಕೃಷ್ಣ ಸ್ವಾಮಿ

Public TV
1 Min Read

ಚಿತ್ರದುರ್ಗ: ಎಲ್ಲೆಡೆ ತಾಂಡವವಾಡುತ್ತಿರುವ ಮಹಾಮಾರಿ ಕೊರೊನಾಗೆ ಬಲಿಯಾಗಿರುವ ವಕೀಲರಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಕಾಂಗ್ರೆಸ್ ವಕ್ತಾರ ಬಾಲಕೃಷ್ಣ ಸ್ವಾಮಿ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 118 ಜನರು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ 6 ವಕೀಲರು ಕೋವಿಡ್ ಸೊಂಕಿನಿಂದಾಗಿ ಮೃತಪಟ್ಟಿದ್ದಾರೆ. ಅಲ್ಲದೆ ವಕೀಲ ವೃತ್ತಿ ನಡೆಸುವವರು ಸಾರ್ವಜನಿಕವಾಗಿ ಇರಲೇಬೇಕಾಗುತ್ತದೆ. ಇವರ ಬಳಿ ಅನೇಕ ಅನೇಕ ಜನರು ನ್ಯಾಯಕ್ಕಾಗಿ ಬರುತ್ತಾರೆ. ಆದ್ದರಿಂದ ಇವರನ್ನು ನ್ಯಾಯಾಂಗದ ಅಧಿಕಾರಿ ಎಂದೇ ಪರಿಗಣಿಸಲಾಗಿದೆ. ಅವರನ್ನು ಕೊರೊನಾ ವಾರಿಯರ್ ಎಂದು ಕೂಡ ಈಗಾಗಲೇ ಗುರುತಿಸಲಾಗಿದೆ. ಇವರ ಬಳಿ ಬಂದ ಕಕ್ಷಿದಾರರಿಂದ ಇವರಿಗೆ ಕೊರೊನಾ ಸೋಂಕು ತಗುಲಿ ಇವರ ಕುಟುಂಬಕ್ಕೂ ಕೂಡ ಕೊರೊನಾ ಸೋಂಕು ತಗುಲಿ ಇಡೀ ಕುಟುಂಬದ ಸದಸ್ಯರ ಪ್ರಾಣಗಳನ್ನು ಕೂಡ ಕಳೆದುಕೊಂಡಿರುವ ನಿದರ್ಶನಗಳಿವೆ ಎಂದು ತಿಳಿಸಿದ್ದಾರೆ.

ಅನೇಕ ಯುವ ವಕೀಲರು ಹಾಗೂ ಕೆಲವೊಂದು ಆರ್ಥಿಕ ಸಂಕಷ್ಟದಲ್ಲಿರುವ ವಕೀಲರು ತೀವ್ರ ಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಈ ಕೂಡಲೇ ರಾಜ್ಯ ಸರ್ಕಾರ ವಕೀಲರ ಸಂಘಗಳ ಮೂಲಕ ಸಂಕಷ್ಟದಲ್ಲಿರುವ ವಕೀಲರನ್ನು ಗುರುತಿಸಿ ಅವಶ್ಯವಿರುವ ವಕೀಲ ಮಿತ್ರರಿಗೆ ಆರ್ಥಿಕ ಪ್ಯಾಕೇಜನ್ನು ನೀಡಬೇಕಾಗಿ ಒತ್ತಾಯಿಸಿದ್ದಾರೆ.

ಹಾಗೆಯೇ ಕೊರೊನಾ ಸೊಂಕಿನಿಂದ ಪ್ರಾಣ ಕಳೆದುಕೊಂಡ ವಕೀಲರಿಗೆ ಹಾಗೂ ಅವರ ಕುಟುಂಬದವರಿಗೆ ತಲಾ 30 ಲಕ್ಷ ರೂನಂತೆ ಪರಿಹಾರವನ್ನು ನೀಡುವಂತೆ ಆಗ್ರಹಿಸಿದ್ದು, ಈ ಕೂಡಲೇ ಎಲ್ಲಾ ವಕೀಲರ ಕುಟುಂಬಗಳ ಸಂರಕ್ಷಣೆ ಹಿತದೃಷ್ಟಿಯಿಂದ ಸರ್ಕಾರ ಕೋವಿಡ್ ವ್ಯಾಕ್ಸಿನ್ ಸಹ ನೀಡಬೇಕೆಂದು ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *