ಕೋಲಾರದಲ್ಲೂ ಮಳೆಯಬ್ಬರ – ತುಂಬಿದ ಕೆರೆ ಕುಂಟೆ, ಬೆಳೆದ ರಾಗಿ ಬೆಳೆ ಮಣ್ಣು ಪಾಲು

Public TV
1 Min Read

ಕೋಲಾರ: ಉತ್ತರ ಕರ್ನಾಟಕ ಮಾತ್ರವಲ್ಲದೆ ಬಯಲು ಸೀಮೆ ಕೋಲಾರ ಜಿಲ್ಲೆಯಲ್ಲೂ ಮಳೆರಾಯನ ಆರ್ಭಟ ಜೋರಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೋಲಾರ, ಬಂಗಾರಪೇಟೆ ಮತ್ತು ಕೆಜಿಎಫ್ ನಗರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಮಾತ್ರವಲ್ಲದೆ ಜಿಲ್ಲೆಯ ಹಲವೆಡೆ ಮುಳಬಾಗಲು, ಶ್ರೀನಿವಾಸಪುರ ಮತ್ತು ಮಾಲೂರು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ರೈತರಲ್ಲಿ ಅತಂಕ ಮೂಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಜೋರು ಮಳೆಗೆ ರಾಗಿ ಸೇರಿದಂತೆ ವಿವಿಧ ಬೆಳೆಗಳು ನೆಲ ಕಚ್ಚುತ್ತಿದ್ದು, ಬೆಳೆದ ಬೆಳೆಯೆಲ್ಲ ಮಣ್ಣು ಪಾಲಾಗುತ್ತಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಬಹುತೇಕ ಕೆರೆ ಕುಂಟೆಗಳೆಲ್ಲ ತುಂಬಿವೆ. ಕೋಲಾರ ಜಿಲ್ಲೆಯಲ್ಲಿ ಮುಂಗಾರಿನಿಂದ ವಾರ್ಷಿಕ ವಾಡಿಕೆ ಮಳೆ 643 ಮಿ.ಮೀ ಇದ್ದು, ಈ ಬಾರಿ ಹೆಚ್ಚಾಗಿ 794 ಮಿ.ಮೀ ನಷ್ಟು ಮಳೆಯಾಗಿದೆ. ಅಂದ್ರೆ ಶೇ 23ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ.

ಅಲ್ಲದೆ ಮಳೆಯಿಂದಾಗಿ 1 ಲಕ್ಷ 2 ಸಾವಿರ ಎಕ್ರೆ ಬಿತ್ತನೆ ಕಾರ್ಯ ಟಾರ್ಗೆಟ್ ಇದ್ದು, ಈ ಬಾರಿ 92 ಸಾವಿರ ಎಕ್ರೆಯಷ್ಟು ಭಿತ್ತನೆ ಕಾರ್ಯ ನಡೆದಿದೆ. ಶೇ 90ರಷ್ಟು ವಿಸ್ತೀರ್ಣದಲ್ಲಿ ಭಿತ್ತನೆ ಕಾರ್ಯ ನಡೆದಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ ದೇವಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ರಾಗಿ 68 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, ಮಳೆಗೆ ರಾಗಿ ತೆನೆ ಭಾಗುತಿದೆ. ಮಳೆ ಹೀಗೆ ಮುಂದುವರೆದಿದ್ದೆ ಆದಲ್ಲಿ ಬೆಳೆ ಹಾನಿಯಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *