ಕೋಲಾರ: ಜಿಲ್ಲೆಯ ವಿವಿಧೆಡೆ ವರುಣನ ಆರ್ಭಟ ಜೋರಾಗಿದ್ದು, ನಗರದಲ್ಲಿ ಸುರಿದ ಮಳೆಯಿಂದಾಗಿ ಕೆಲ ಬಡಾವಣೆಯ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಶಾಂತಿ ನಗರ ಹಾಗೂ ರೆಹಮತ್ ನಗರದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಕೆಲ ಮನೆಗಳಲ್ಲಿ ನೀರು ಹೊರ ಹಾಕಲು ಜನ ಹರ ಸಾಹಸ ಪಡಬೇಕಾಯಿತು. ಭಾರೀ ಮಳೆಯಿಂದಾಗಿ ಅಂತರಗಂಗೆ ಬೆಟ್ಟದಿಂದ ಹೆಚ್ಚು ನೀರು ಹರಿದು ಬರುತ್ತಿದೆ. ಆದರೆ ರಾಜಕಾಲುವೆ ಒತ್ತುವರಿ ಹಾಗೂ ಕಸದಿಂದ ಕಾಲುವೆ ಬ್ಲಾಕ್ ಆಗಿರುವುದರಿಂದ ನೀರು ಸರಾಗವಾಗಿ ಹರಿಯದೆ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದೆ.
ರಹಮತ್ ನಗರ, ಶಾಂತಿನಗರದಲ್ಲಿ ಮನೆಗಳಿಗೆ ಚರಂಡಿ ನೀರಿನ ಜೊತೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿತ್ತು. ಮನೆಗೆ ನುಗ್ಗಿದ ನೀರನ್ನ ಹೊರಹಾಕಲು ಈ ಭಾಗದ ಜನರು ಹರಸಾಹಸ ಪಟ್ಟಿದ್ದಾರೆ. ಅಲ್ಲದೆ ಕೋಲಾರದ ಕಾರಂಜಿಕಟ್ಟೆ ಹಾಗೂ ಕೀಲುಕೋಟೆ ಅಂಡರ್ ಪಾಸ್ ನಲ್ಲಿ ನೀರು ನಿಂತು ವಾಹನ ಸವಾರರು ಪರದಾಡಬೇಕಾಯಿತು. ರೈಲ್ವೆ ಅಧಿಕಾರಿಗಳ ಕಾರ್ಯ ವೈಖರಿಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಗಲ್ ಪೇಟೆ ಪೊಲೀಸ್ ವಸತಿ ಗೃಹ ಮುಖ್ಯ ರಸ್ತೆ ಜಲಾವೃತಗೊಂಡಿತ್ತು. ಮಳೆಯ ಆಗಮನ ನಗರ ಪ್ರದೇಶಗಳಿಗೆ ಕಂಟಕವಾಗಿದ್ದರೆ, ಗ್ರಾಮೀಣ ಭಾಗದ ಜಿಲ್ಲೆಯ ರೈತರಲ್ಲಿ ಸಂತಸ ಉಂಟು ಮಾಡಿದ್ದು, ಕೃಷಿ ಚುವಟಿಕೆಗಳು ಗರಿಗೆರಿವೆ. ಅಷ್ಟೆ ಅಲ್ಲದೆ ಸಣ್ಣಪುಟ್ಟ ಕೆರೆ, ಕಾಲುವೆ, ಕುಂಟೆಗಳಿಗೆ ನೀರು ಬಂದಿರುವುದು ಖುಷಿ ಕೊಟ್ಟಿದೆ.