ಕೊರೋನಾ ವಿರುದ್ಧ ಊರಿಗೆ ಊರೇ ಫೈಟ್- ಕಷಾಯ ಕುಡಿದ್ರಷ್ಟೇ ಹೋಟೆಲ್‍ನಲ್ಲಿ ಟಿಫನ್..!

Public TV
1 Min Read

ಗದಗ: ಇಲ್ಲಿನ ಗ್ರಾಮವೊಂದರಲ್ಲಿ ಯಾವುದೇ ಹೋಟೆಲ್‍ಗೆ ಹೋದರೂ ಒಂದು ಲೋಟ ಕಷಾಯ ಕೊಡ್ತಾರೆ. ಬೇಡಪ್ಪ ಕಷಾಯ ಕುಡಿಯೋಕ್ಕಾಗಲ್ಲ ಅಂದ್ರೆ ಅಲ್ಲಿಂದ ಜಾಗ ಖಾಲಿ ಮಾಡು ಅಂತಾರೆ. ಇಡೀ ಊರೇ ರೋಗ ನಿರೋಧಕ ಶಕ್ತಿ ಇದ್ದವನೇ ಮಹಾಶೂರ ಅಂತಿದೆ.

ಹೌದು. ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಇಡೀ ಊರಿಗೆ ಊರೇ ಕೊರೋನಾ ವಿರುದ್ಧ ಟೊಂಕಕಟ್ಟಿ ನಿಂತಿದೆ. ಹೆಮ್ಮಾರಿ ಕೊರೋನಾ ಹಿಮ್ಮೆಟ್ಟಿಸಲು ಗ್ರಾಮ ಪಂಚಾಯ್ತಿ ಮಾಡಿರೋ ಮಾಸ್ಟರ್ ಪ್ಲಾನ್‍ನಿಂದಾಗಿ ಗ್ರಾಮಸ್ಥರು ಆರೋಗ್ಯವೇ ಭಾಗ್ಯ ಅಂತಿದ್ದಾರೆ.

ಗ್ರಾಮದಲ್ಲಿ ಯಾವುದೇ ಹೋಟೆಲ್‍ಗೆ ಹೋದ್ರೂ ಮೊದ್ಲು ಒಂದು ಲೋಟ ಕಷಾಯ ಕೊಡ್ತಾರೆ. ಆಮೇಲೆ ಊಟ, ತಿಂಡಿ ಏನ್ ಬೇಕು ಅಂತ ಕೇಳ್ತಾರೆ. ಕಷಾಯಕ್ಕೆ ಆಯುರ್ವೇದಲ್ಲಿ ವಿಶೇಷ ಸ್ಥಾನ ಇದೆ. ಗಂಟಲಿನಲ್ಲಿನ ವೈಸರ್‍ಗಳನ್ನು ಕೊಲ್ಲಬಲ್ಲ, ರೋಗನಿರೋಧಕ ಶಕ್ತಿಯನ್ನ ಹೆಚ್ವಿಸುವಲ್ಲೂ ಕಷಾಯ ಸಹಕಾರಿ. ಹೀಗಾಗಿ ಅಬ್ಬಿಗೇರಿ ಗ್ರಾಮ ಪಂಚಾಯ್ತಿ ಗ್ರಾಮದ ಪ್ರತಿ ಹೋಟೆಲ್‍ಗಳಲ್ಲಿ ಕಷಾಯ ನೀಡುವಂತೆ ಮನವಿ ಮಾಡಿದೆ. ಟೀ ಅಂಗಡಿಗೆ ಹೋದ್ರೂ ಅಲ್ಲೂ ಮೊದಲಿಗೆ ಒಂದು ಕಪ್ ಕಷಾಯ ಕೊಡ್ತಾರೆ. ಹೋಟೆಲ್‍ಗಳಲ್ಲಿ ಒಂದು ವೇಳೆ ಕಷಾಯ ಬೇಡಪ್ಪ ಅಂದ್ರೆ ಎದ್ದು ಮುಂದಕ್ಕೆ ಹೋಗಯ್ಯ ಅಂತಾರೆ.. ಇನ್ನು ಎಲ್ಲೇ ಕಷಾಯ ಕುಡಿದ್ರೂ ಹಣ ಪಡೆಯಲ್ಲ.

ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಅಧಿಕಾರಿಗಳ ಮನವಿಯಂತೆ ಸದ್ಯ ಹೋಟೆಲ್‍ನವರೇ ಉಚಿತವಾಗಿ ಕಷಾಯ ಕೊಡ್ತಿದ್ದಾರೆ. ಕೆಲ ದಿನದಲ್ಲೇ ಗ್ರಾಮ ಪಂಚಾಯ್ತಿ ವತಿಯಿಂದ ಕಷಾಯ ಪೌಡರ್, ಬೆಲ್ಲ, ಇತರೆ ಸಾಮಗ್ರಿಯನ್ನು ಪೂರೈಸಲಿದೆ.  ಇದನ್ನೂ ಓದಿ:ಆನ್‍ಲೈನ್ ಕ್ಲಾಸ್‍ಗಾಗಿ 2 ಕಿ.ಮೀ ದೂರದಲ್ಲಿ ತಾವೇ ಕ್ಲಾಸ್ ರೂಂ ರೆಡಿ ಮಾಡಿದ ವಿದ್ಯಾರ್ಥಿಗಳು..!

ಒಟ್ಟಿನಲ್ಲಿ ಕೊರೋನಾ ಸಂದಿಗ್ಧ ಸ್ಥಿತಿಯಲ್ಲಿ ಆರೋಗ್ಯದ ಬಗ್ಗೆ ಜನತೆ ಕಾಳಜಿ ವಹಿಸಲು ಅಬ್ಬಿಗೇರಿ ಗ್ರಾಮ ಪಂಚಾಯ್ತಿ ಕೈಗೊಂಡಿರೋ ಕ್ರಮ ಇತರರಿಗೆ ಮಾದರಿಯೇ ಸರಿ.

Share This Article
Leave a Comment

Leave a Reply

Your email address will not be published. Required fields are marked *