ಕೊರೊನಾ 3ನೇ ಅಲೆ ಭೀತಿ – ಆರತಿ ಉಕ್ಕಡ, ಮಹದೇಶ್ವರ ಬೆಟ್ಟಕ್ಕೆ ಭಕ್ತರ ನಿಷೇಧ

Public TV
2 Min Read

ಮಂಡ್ಯ/ಚಾಮರಾಜನಗರ: ಇಂದು ಆಷಾಡದಲ್ಲಿ ಬರುವ ವಿಶೇಷ ಭೀಮನ ಅಮಾವಾಸ್ಯೆಯಾಗಿರುವುದರಿಂದ ಹಲವಾರು ದೇವಾಲಗಳಿಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಸದ್ಯ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಭೀತಿ ಉಂಟಾಗಿದ್ದು, ದೇವಾಲಯಗಳಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಧಾವಿಸುತ್ತಿರುವ ಕಾರಣ ದೇವಸ್ಥಾನಕ್ಕೆ ಭಕ್ತರನ್ನು ನಿಷೇಧಿಸಲಾಗಿದೆ.

ಪ್ರತಿ ಅಮಾವಾಸ್ಯೆಯಂದು ಒಂದೇ ದಿನ ಒಂದು ಕೋಟಿಗೂ ಅಧಿಕ ಆದಾಯ ಬರುತ್ತಿದ್ದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡದ ಮಾರಮ್ಮ ಅಹಲ್ಯಾದೇವಿಯ ದೇವಸ್ಥಾನಕ್ಕೆ ಅಮಾವಾಸ್ಯೆ ದಿನದಂದು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಕ್ತರಿಗೆ ನಿರ್ಬಂಧ ಏರಲಾಗಿದೆ.

ಇಂದು ಭೀಮನ ಅಮಾವಾಸ್ಯೆ ಹಿನ್ನೆಲೆ ಲಕ್ಷಾಂತರ ಮಂದಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಬಲಿ ನೀಡಿ, ತಡೆ ಹೊಡೆಸಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದರು. ಅಲ್ಲದೇ ಬಾಡೂಟವನ್ನು ಸಹ ಮಾಡುತ್ತಿದ್ದರು. ಇದೀಗ ಭಕ್ತರಿಗೆ ನಿಷೇಧ ಇರುವ ಹಿನ್ನೆಲೆ ದೇವಸ್ಥಾನ ಬಿಕೋ ಎನ್ನುವ ಜೊತೆಗೆ ಒಂದು ಕೋಟಿಗೂ ಅಧಿಕ ಆದಾಯಕ್ಕೂ ಕತ್ತರಿ ಬಿದ್ದಿದೆ. ಆರತಿ ಉಕ್ಕಡಕ್ಕೆ ಪ್ರತಿ ಅಮಾವಾಸ್ಯೆ ದಿನಗಳಂದು ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಬೆಂಗಳೂರು, ರಾಮನಗರ, ಕೊಡಗು ಸೇರಿದಂತೆ ಇತರೆ ಜಿಲ್ಲೆಗಳಿಂದ ಲಕ್ಷಾಂತರ ಜನರು ಬರುತ್ತಾರೆ. ಇಂದು ಸಹ ಭೀಮನ ಅಮಾವಾಸ್ಯೆ ಹಿನ್ನೆಲೆ ಲಕ್ಷಾಂತರ ಜನರು ಬರುವ ಸಾಧ್ಯತೆ ಇತ್ತು. ಆದರೆ ಭಕ್ತರಿಗೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣ ಬಿಕೋ ಎನ್ನುತ್ತಿದೆ. ವಿಷಯ ತಿಳಿಯದ ಭಕ್ತರು ದೇವಸ್ಥಾನದ ಬಳಿಗೆ ಬಂದು ವಾಪಸ್ಸು ತೆರಳುತ್ತಿದ್ದಾರೆ.

ಮತ್ತೊಂದೆಡೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆಮಹಾದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ದಿನದಂದು ಭಕ್ತದಿಗಳೂ ತುಂಬಿರುತ್ತಿದ್ದರು. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಭಕ್ತರಿಲ್ಲದೇ ಮುಂಜಾನೆ 3 ಗಂಟೆಯಿಂದ 6.30ರವರೆಗೆ ನಡೆದ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದೆ. ಅಮಾವಾಸ್ಯೆ ದಿನದಂದು ಮಾದಪ್ಪನ ದರ್ಶನ ಪಡೆದ್ರೆ ಇಷ್ಟಾರ್ಥ ಈಡೇರಿಕೆಯಾಗುತ್ತೆ ಎಂದು ಲಕ್ಷಾಂತರು ಭಕ್ತರು ದರ್ಶನ ಪಡೆಯುತ್ತಿದ್ದರು. ಪ್ರಥಮ ಪೂಜೆ, ಸಂಕಲ್ಪ, ಪಂಚಕಳಸ ಪೂಜೆ, ಪಂಚಾಮೃತ ಅಭಿಷೇಕಾ, ಕ್ಷೀರ ಅಭಿಷೇಕ, ಬಿಲ್ವಾರ್ಚನೆ, ಅಲಂಕಾರ, ಮಹಮಂಗಳಾರತಿ ಪೂಜೆಗಳಿಗೆ ಭಕ್ತರು ಜಾತ್ರೆಯ ರೀತಿ ಜಮಾಯಿಸುತ್ತಿದ್ದರು. ಆದರೆ ಕೊರೊನಾ ಆತಂಕದಿಂದ ಬೆಟ್ಟಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿದೆ.

ವೀಕೆಂಡ್ ಕರ್ಫ್ಯೂ ಜಾರಿಯಲ್ಲಿ ಇದ್ದರೂ ಚಾಮರಾಜನಗರದ ಪ್ರಸಿದ್ಧ ಮುದುಕಮಾರಮ್ಮ ದೇವಸ್ಥಾನ ಮಾತ್ರ ಓಪನ್ ಆಗಿತ್ತು. ನಗರದ ಮುದುಕ ಮಾರಮ್ಮ ದೇವಾಲಯದಲ್ಲಿ ಭಕ್ತರ ಪ್ರವೇಶಕ್ಕೆ ಯಾವುದೇ ಅಡೆತಡೆ ಇರಲಿಲ್ಲ. ಬೆಳಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸಿದ ಭಕ್ತರು ಯಾವುದೇ ಅಂತರ ಪಾಲಿಸದೆ ವಿಶೇಷ ಪೂಜೆ ಸಲ್ಲಿಸಿದರು. ಇಲ್ಲಿ ಹೇಳುವವರು ಇಲ್ಲ, ಕೇಳುವವರು ಇಲ್ಲದಂತಾಗಿದ್ದು, ಕೊರೊನಾ ರೂಲ್ಸ್ ಬ್ರೇಕ್ ಮಾಡಲಾಗಿದೆ. ಮೊನ್ನೆ ಆಷಾಡ ಶುಕ್ರವಾರ ನಿಷೇಧವಿದ್ದರೂ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರಿಂದಲೇ ಉಲ್ಲಂಘನೆಯಾಗಿತ್ತು. ಇದೀಗ ಸಾರ್ವಜನಿಕರಿಂದಲೂ ಕೊರೊನಾ ರೂಲ್ಸ್ ಉಲ್ಲಂಘನೆಯಾಗಿದೆ. ಇದನ್ನೂ ಓದಿ:ಇಂದಿನಿಂದ ಆಗಸ್ಟ್ 15ರವರೆಗೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಕಟ್

Share This Article
Leave a Comment

Leave a Reply

Your email address will not be published. Required fields are marked *