ಕೊರೊನಾ ಹೆಚ್ಚಳ- ಉತ್ತರ ಕನ್ನಡ ಗಡಿಗಳಲ್ಲಿ ಕಟ್ಟೆಚ್ಚರ

Public TV
1 Min Read

– ಹೊರ ರಾಜ್ಯಗಳಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ

ಕಾರವಾರ: ಉತ್ತರ ಕನ್ನಡ ಜಿಲ್ಲೆಯು ಗೋವಾ ಗಡಿಯನ್ನು ಹಂಚಿಕೊಂಡಿದೆ. ಉದ್ಯೋಗ ನಿಮಿತ್ತ ಕರಾವಳಿ ಭಾಗದ ಜನರು ನೆರೆಯ ಗೋವಾ ಹಾಗೂ ಮಹಾರಾಷ್ಟ್ರವನ್ನು ಅವಲಂಬಿಸಿದ್ದಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಕೊರೊನಾ ನಿಯಮವನ್ನು ಕಠಿಣವಾಗಿ ಜಾರಿಗೆ ತರಲಾಗಿದೆ.

ಗೋವಾ ಗಡಿ ಹಂಚಿಕೊಂಡಿರುವ ಕಾರವಾರದ ಮಾಜಾಳಿಯಲ್ಲಿ ಗೋವಾ, ಮಹಾರಾಷ್ಟ್ರದಿಂದ ಬರುವ ಜನರು ಕಡ್ಡಾಯವಾಗಿ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಇರಬೇಕಿದ್ದು, 24 ಗಂಟೆಯೊಳಗೆ ತಪಾಸಣೆ ಮಾಡಿಸಿಕೊಂಡಿರಬೇಕು. ಈ ಹಿಂದೆ ವ್ಯಾಕ್ಸಿನ್ ತೆಗೆದುಕೊಂಡವರಿಗೆ ಕರ್ನಾಟಕದ ಗಡಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಇದೀಗ ವ್ಯಾಕ್ಸಿನ್ ಪಡೆದವರು ಸಹ ಕೋವಿಡ್ ನೆಗೆಟಿವ್ ವರದಿ ತರಬೇಕಿದೆ. ಇದನ್ನೂ ಓದಿ: ರಾಜ್ಯದ 8 ಜಿಲ್ಲೆಗಳಲ್ಲಿ ಇಂದಿನಿಂದಲೇ ವೀಕೆಂಡ್ ಕರ್ಫ್ಯೂ ಜಾರಿ

ಬಸ್ ಪ್ರಯಾಣಿಕರು, ಲಾರಿ ಚಾಲಕರಿಗೂ ಸಹ ಈ ನಿಯಮ ಅನ್ವಯಿಸಲಿದ್ದು, ಬೇರೆ ರಾಜ್ಯದಿಂದ ಬಂದ ಪ್ರತಿಯೊಬ್ಬರಿಗೂ ಕೈಗೆ ಸೀಲ್ ಹಾಕುವ ಮೂಲಕ 14 ದಿನ ಹೋಮ್ ಕ್ವಾರಂಟೈನ್ ಇರಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಪ್ರವಾಸಿ ಸ್ಥಳಗಳಲ್ಲಿ ಜಲಸಾಹಸ ಕ್ರೀಡೆಗೆ ನಿರ್ಬಂಧ ಹೇರಲಾಗಿದೆ. ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ಧಾರ್ಮಿಕ ವಿಧಿ ನಡೆಸಲು ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಐದಕ್ಕಿಂತ ಹೆಚ್ಚು ಪಾಸಿಟಿವ್ ವರದಿ ಇರುವ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗುದ್ದು, ಈಗಾಗಲೇ ಐದು ಕಂಟೈನ್ಮೆಂಟ್ ಝೋನ್ ಗಳಿವೆ. ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ತಪಾಸಣೆ ಕಾರ್ಯವನ್ನು ಜಿಲ್ಲಾಡಳಿತ ಪ್ರಾರಂಭಿಸುತಿದ್ದು, ವೀಕೆಂಡ್ ಕರ್ಫ್ಯೂ ಗೆ ಸಹ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *