ಕೊರೊನಾ ಸೋಂಕಿತ ಕೋಲಾರದಿಂದ ಎಸ್ಕೇಪ್, ಬೆಂಗಳೂರಲ್ಲಿ ಪ್ರತ್ಯಕ್ಷ

Public TV
1 Min Read

– ಹರಸಾಹಸ ಮಾಡಿ ಸೋಂಕಿತ ಲಾಕ್

ಕೋಲಾರ: ಚಿನ್ನದ ನಾಡು ಕೋಲಾರದಲ್ಲಿ ಸೋಂಕಿತರ ಸಂಖ್ಯೆ 6ಕ್ಕೇರಿದೆ. ಸೋಂಕಿತ ಕೋರ್ಟ್ ಉದ್ಯೋಗಿಯ ಟ್ರಾವಲ್ ಹಿಸ್ಟರಿ ಮೂರು ನಗರಗಳ ನಿದ್ದೆಗೆಡಿಸಿದೆ. ಯಾಕೆಂದರೆ ಸೋಂಕಿತನೊಬ್ಬ ಎಸ್ಕೇಪ್ ಆಗಿದ್ದು, ಎಲ್ಲರ ಕಣ್ಣುತಪ್ಪಿಸಿ ಬೆಂಗಳೂರಿಗೆ ಬಂದುಬಿಟ್ಟಿದ್ದ. ಕೊನೆಗೆ ಆರೋಗ್ಯಾಧಿಕಾರಿಗಳು ಹುಡುಕಾಟ ನಡೆಸಿ ಎಸ್ಕೇಪ್ ಆಗಿದ್ದ ಸೋಂಕಿತನ್ನು ಲಾಕ್ ಮಾಡಿ, ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಐಸೋಲೇಶನ್ ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ.

ಕೋಲಾರದ ಗಾಂಧಿನಗರದಲ್ಲಿ ವಾಸವಿದ್ದ ಮಂಡ್ಯ ಮೂಲದ ಕೋರ್ಟ್ ಉದ್ಯೋಗಿಯಲ್ಲಿ ಕೊರೊನಾ ಸೋಂಕು ಲಕ್ಷಣ ಕಂಡುಬಂದಿತ್ತು. ಗಂಟಲು ದ್ರವದ ಪರೀಕ್ಷೆ ಬಳಿಕ ಕ್ವಾರಂಟೈನ್‍ನಲ್ಲಿರು ಅಂತ ಅಧಿಕಾರಿಗಳು ಸೂಚನೆ ನೀಡಿದರು. ಶುಕ್ರವಾರ ಸಂಜೆ ಆತನಿಗೆ ಸೋಂಕು ಬಂದಿರೋದು ದೃಢಪಟ್ಟಿತ್ತು. ಹೀಗಾಗಿ ಆತನನ್ನ ಐಸೋಲೇಷನ್ ವಾರ್ಡಿಗೆ ಕರೆ ತರಲು ಅಧಿಕಾರಿಗಳು ಸೋಂಕಿತನ ಮನೆಗೆ ಹೋದಾಗ ಆತ ಮನೆಯಲ್ಲಿರದೇ ಬೆಂಗಳೂರಿಗೆ ಎಸ್ಕೇಪ್ ಆಗಿದ್ದ.

ಸೋಂಕಿತನ ಟ್ರಾವೆಲ್ ಹಿಸ್ಟರಿ ಮೂರು ನಗರಗಳ ನಿದ್ದೆಗೆಡಿಸಿದೆ. ಸೋಂಕಿತ ಮಂಡ್ಯದ ಮದ್ದೂರಿಗೆ ಭೇಟಿ ನೀಡಿದ್ದನು. ಸೋಂಕಿತ ಕಳೆದ ಮೇ 11ರಂದು ಕೋಲಾರ ನಗರಕ್ಕೆ ವಾಪಸ್ ಆಗಿದ್ದ. ಅಂದೇ ಸ್ವಾಬ್ ಪಡೆದು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ವರದಿಗೂ ಮುನ್ನವೇ ಕೋಲಾರ, ಬೆಂಗಳೂರಿನಲ್ಲಿ ಓಡಾಟ ಮಾಡಿದ್ದ. ಸೋಂಕು ತಗುಲಿರುವುದು ಶುಕ್ರವಾರದ ವರದಿಯಲ್ಲಿ ದೃಢವಾಗಿದೆ. ಆದರೂ ಕೋಲಾರದಿಂದ ಬೆಂಗಳೂರಿನ ಜೆ.ಪಿ ನಗರದಲ್ಲಿ ಪ್ರತ್ಯಕ್ಷವಾಗಿದ್ದಾನೆ.

ಸೋಂಕಿತ ಬೆಂಗಳೂರಿಗೆ ಬಂದಿದ್ದು ಹೇಗೆ ಬಂದ ಅನ್ನೋದು ಅಧಿಕಾರಿಗಳಿಗೆ ಗೊತ್ತಾಗಿಲ್ಲ. ದ್ವಿಚಕ್ರ ವಾಹನದಲ್ಲಿ ಬಂದನಾ? ಕಾರಲ್ಲಿ ಬಂದನಾ? ಕೋಲಾರ, ಬೆಂಗಳೂರಲ್ಲಿ ಯಾರನ್ನು ಸಂಪರ್ಕಿಸಿದ್ದ. ಅನ್ನೋದನ್ನು ಸೋಂಕಿತ ಸರಿಯಾಗಿ ಬಾಯ್ಬಿಟ್ಟಿಲ್ಲ. ಇದರಿಂದ ಆರೋಗ್ಯಾಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಸದ್ಯ ಸೋಂಕಿತನ ಟ್ರಾವಲ್ ಹಿಸ್ಟರಿ ಸೇರಿದಂತೆ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರ ಮಾಹಿತಿಗಾಗಿ ಹುಡುಕಾಟ ಮಾಡಲಾಗುತ್ತಿದೆ.  ಕೋಲಾರದಲ್ಲಿ ವಾಸವಿದ್ದ ಬಾಡಿಗೆ ಮನೆಯ ಸುತ್ತಮುತ್ತ ಪ್ರದೇಶವನ್ನ ಕಂಟೈನ್ಮೆಂಟ್ ಝೋನ್‍ಗೆ ಸೇರ್ಪಡೆ ಮಾಡಲಾಗಿದೆ. ಸೋಂಕಿತ ವಾಸವಿದ್ದ ನಗರದ ಸುತ್ತ ಬ್ಯಾರಿಕೇಡ್ ಹಾಕಿ ಪೊಲೀಸರು ಸೀಲ್ ಮಾಡಿದ್ದಾರೆ. ಕೋಲಾರ ಮಾತ್ರವಲ್ಲದೆ ಮಂಡ್ಯ, ಬೆಂಗಳೂರಿನಲ್ಲೂ ಸೋಂಕಿತ ಓಡಾಡಿದ್ದರಿಂದ ಸೋಂಕು ಹರಡುವ ಆತಂಕ ಎದುರಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *