ಕೊರೊನಾ ವ್ಯಾಕ್ಸಿನ್‍ಗೂ ವಿವಿಐಪಿ ದರ್ಬಾರ್ – ಆಸ್ಪತ್ರೆ ಸಿಬ್ಬಂದಿಯನ್ನ ಮನೆಗೆ ಕರೆಸಿಕೊಂಡ ಬಿ.ಸಿ.ಪಾಟೀಲ್

Public TV
1 Min Read

– ಕೊರೊನಾ ಮಾರ್ಗಸೂಚಿಯನ್ನೇ ಬದಲಿಸಿದ್ರಾ ಸಚಿವರು?
– ಸಚಿವರ ನಡೆಗೆ ಆರೋಗ್ಯಾಧಿಕಾರಿಗಳ ಸಮರ್ಥನೆ

ಬೆಂಗಳೂರು: ಆಸ್ಪತ್ರೆ ಸಿಬ್ಬಂದಿಯನ್ನ ಮನೆಗೆ ಕರೆಸಿಕೊಂಡು ಕೊರೊನಾ ಲಸಿಕೆ ಪಡೆದುಕೊಳ್ಳುವ ಮೂಲಕ ಸಚಿವ ಬಿ.ಸಿ.ಪಾಟೀಲ್ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸೋಮವಾರದಿಂದ ರಾಜ್ಯದಲ್ಲಿ ಮೂರನೇ ಹಂತದ ಕೊರೊನಾ ವ್ಯಾಕ್ಸಿನ್ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಲಸಿಕೆ ಪಡೆದುಕೊಂಡಿದ್ದಾರೆ. ಪ್ರಧಾನಿಗಳು ಸಹ ಆಸ್ಪತ್ರೆಗೆ ತೆರಳಿ ಕೊರೊನಾ ವ್ಯಾಕ್ಸಿನ್ ಪಡೆದುಕೊಳ್ಳುವ ಮೂಲಕ ಮಾರ್ಗಸೂಚಿಗಳನ್ನ ಪಾಲಿಸಿದ್ದರು. ಅವರದ್ದೇ ಪಕ್ಷದ ಸಚಿವ ಬಿ.ಸಿ.ಪಾಟೀಲರು ಮಾತ್ರ ಲಸಿಕೆ ಪಡೆದುಕೊಳ್ಳಲು ಆಸ್ಪತ್ರೆ ಸಿಬ್ಬಂದಿಯನ್ನೇ ಮನೆಗೆ ಕರೆಸಿಕೊಳ್ಳುವ ಮೂಲಕ ವಿವಿಐಪಿ ದರ್ಬಾರ್ ನಡೆಸಿದ್ದಾರೆ.

ಕೊರೊನಾ ಲಸಿಕೆ ಪಡೆದುಕೊಳ್ಳುವವರು ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಂಡು ನಿಗದಿತ ಸರ್ಕಾರಿ/ಖಾಸಗಿ ಆಸ್ಪತ್ರೆಗೆ ತೆರಳಿ ವ್ಯಾಕ್ಸಿನ್ ಪಡೆಯಬೇಕು. ಲಸಿಕೆ ಪಡೆದ ನಂತರ ಅರ್ಧಗಂಟೆ ಆಸ್ಪತ್ರೆಯಲ್ಲಿ ವೈದ್ಯರ ಅಬ್ಸರ್ ವೇಷನ್ ನಲ್ಲಿರಬೇಕು. ಆದರೆ ಸಚಿವರು ಆಸ್ಪತ್ರೆಗೆ ತೆರಳದೇ ಮನೆಯಲ್ಲಿ ತಮ್ಮ ಜೊತೆ ಪತ್ನಿಗೂ ಕೊರೊನಾ ಲಸಿಕೆ ಕೊಡಿಸಿಕೊಂಡಿದ್ದಾರೆ.

ಆರೋಗ್ಯಾಧಿಕಾರಿಗಳ ಸಮರ್ಥನೆ: ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಿಹೆಚ್‍ಓ ರಾಜೇಂದ್ರ ದೊಡ್ಡಮನಿ, ಮನೆಯಲ್ಲಿ ಲಸಿಕೆ ಪಡೆಯಲು ಅವಕಾಶವಿಲ್ಲ. ಸಚಿವರು ಮನೆಯಲ್ಲಿ ಲಸಿಕೆ ಪಡೆದುಕೊಂಡಿರುವ ಮಾಹಿತಿ ನನಗಿಲ್ಲ. ಈ ಬಗ್ಗೆ ವಿಚಾರಿಸುತ್ತೇನೆ ಎಂದು ಹೇಳಿದರು. ಇನ್ನು ಮನೆಗೆ ಸಿಬ್ಬಂದಿ ಕರೆಸಿ ಲಸಿಕೆ ಪಡೆದುಕೊಂಡ ನಡೆಯನ್ನ ಟಿಎಚ್‍ಓ ಡಾ. ಮಕಂದಾರ್ ಸಮರ್ಥಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಹೆಚ್ಚಿನ ಜನರು ಇರೋದರಿಂದ ಮನೆಯಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಸೋಮವಾರ ಎಷ್ಟೋ ಜನ ಊರುಗೋಲು ಹಿಡಿದು, ವ್ಹೀಲ್ ಚೇರ್ ಮೇಲೆ ಕುಳಿತು ಗಂಟೆಗಟ್ಟಲೇ ಕಾದು ಲಸಿಕೆ ಪಡೆದಿದ್ದರು. ಸಚಿವರು ಲಸಿಕೆ ಪಡೆಯಲು ಆಸ್ಪತ್ರೆಗೆ ಬರದಷ್ಟು ದಣಿದಿದ್ದರಾ? ಲಸಿಕೆ ಏನು ಫುಡ್ ಡೆಲಿವರಿ ಅಂದುಕೊಂಡಿದ್ದೀರಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *