ಕೊರೊನಾ ಚಿಕಿತ್ಸೆಗೆ 19 ದಿನಕ್ಕೆ 11 ಲಕ್ಷ ಬಿಲ್- 1 ರೂ.ಡಿಸ್ಕೌಂಟ್

Public TV
2 Min Read

– ಬಿಲ್ ನೋಡಿ ಕುಟುಂಬಸ್ಥರು ಶಾಕ್
– 19 ದಿನ ಕೇಳಿದರೂ ಯಾವುದೇ ವರದಿ ನೀಡದ ಆಸ್ಪತ್ರೆ

ಚಿಕ್ಕಮಗಳೂರು: ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳು ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದು, ಚಿಕಿತ್ಸೆ ದಾಖಲಾದ ವ್ಯಕ್ತಿಗೆ ಕೇವಲ 19 ದಿನಕ್ಕೆ 11 ಲಕ್ಷ ರೂ.ಬಿಲ್ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ಪಿಳ್ಳೇನಹಳ್ಳಿ ಗ್ರಾಮದ 70 ವರ್ಷದ ನಂಜುಡಪ್ಪ ಅವರಿಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆಗಸ್ಟ್ 24ರಂದು ನಗರದ ಆಶ್ರಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಚಿಕಿತ್ಸೆಗೆಂದು ದಾಖಲಾದ ವ್ಯಕ್ತಿಗೆ ಖಾಸಗಿ ಆಸ್ಪತ್ರೆ 19 ದಿನಕ್ಕೆ 11 ಲಕ್ಷ ಬಿಲ್ ಮಾಡಿದ್ದು, ಬಿಲ್ ನೋಡಿದ ಕುಟುಂಬಸ್ಥರು ದಿಗ್ಭ್ರಾಂತರಾಗಿದ್ದಾರೆ.

ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ನಂಜುಂಡಪ್ಪ ಅವರಿಗೆ ಕೊರೊನಾ ಟೆಸ್ಟ್ ಮಾಡಿದ್ದು, ಈ ವೇಳೆ ಪಾಸಿಟಿವ್ ಇದೆ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. ಬಳಿಕ 19 ದಿನಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಆದರೆ ನಂಜುಂಡಪ್ಪ ಅವರು ಬದುಕುಳಿದಿಲ್ಲ. ಆದರೆ 19 ದಿನಗಳ ಚಿಕಿತ್ಸೆಗೆ 9.25 ಲಕ್ಷ ರೂ. ಆಸ್ಪತ್ರೆ ಬಿಲ್ ಹಾಗೂ 1.54 ಲಕ್ಷ ರೂ. ಮೆಡಿಕಲ್ ಬಿಲ್ ಸೇರಿ ಸುಮಾರು 11 ಲಕ್ಷ ಬಿಲ್ ಮಾಡಿದ್ದಾರೆ.

ಬಿಲ್ ಕಂಡು ಮೃತ ನಂಜುಂಡಪ್ಪನವರ ಕುಟುಂಬಸ್ಥರಿಗೆ ಶಾಕ್ ಆಗಿದೆ. ಕೊನೆಗೆ ಆಸ್ಪತ್ರೆಯವರು ಬಿಲ್ ಪಾವತಿ ಮಾಡಿ ಮೃತದೇಹ ತೆಗೆದುಕೊಂಡಿ ಹೋಗಿ ಎಂದು ಮೃತನ ಸಂಬಂಧಿಕರಿಗೆ ಹೇಳಿದ್ದಾರೆ. ಮೃತ ನಂಜುಂಡಪ್ಪನವರ ಸಂಬಂಧಿಗಳು ಬಿಲ್‍ನಲ್ಲಿ ರಿಯಾಯಿತಿ ನೀಡುವಂತೆ ಕೇಳಿಕೊಂಡಾಗ ಆಸ್ಪತ್ರೆಯವರು ಒಂದೇ ಒಂದು ರೂಪಾಯಿ ರಿಯಾಯಿತಿ ನೀಡಿದ್ದಾರೆ.

ಇದೀಗ ಮೃತನ ಸಂಬಂಧಿಗಳು ನಾವು ಬೇರೆ ಆಸ್ಪತ್ರೆಗೆ ಹೋಗ್ತೀವಿ ಎಂದರೂ ಕಳುಹಿಸದೆ, ನಾವೇ ಚಿಕಿತ್ಸೆ ನೀಡಿ, ಹುಷಾರು ಮಾಡುತ್ತೇವೆ ಎಂದು ಇಲ್ಲೇ ಇಟ್ಟುಕೊಂಡು ಪ್ರಾಣವನ್ನೂ ಉಳಿಸದೆ ಲಕ್ಷಾಂತರ ರೂಪಾಯಿ ಬಿಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಮೃತನ ಸಂಬಂಧಿಗಳು ಹೆಚ್ಚುವರಿ ಹಣವನ್ನು ಮರುಪಾವತಿಸುವ ಬಗ್ಗೆ ಜಿಲ್ಲಾಧಿಕಾರಿಗೆ ಲಿಖಿತವಾಗಿ ದೂರು ನೀಡಿದ್ದಾರೆ. ರೋಗಿ ಆಸ್ಪತ್ರೆಯಲ್ಲಿ ಇದ್ದಷ್ಟು ದಿನ ಆಸ್ಪತ್ರೆಯವರು ಯಾವುದೇ ರಿಪೋರ್ಟ್ ಕೇಳಿದರೂ ಕೊಟ್ಟಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ರೀತಿ ಬೇರೆಯವರಿಗೆ ಆಗೋದು ಬೇಡ ಎಂದು ಜಿಲ್ಲಾಧಿಕಾರಿ ಡಿಎಚ್‍ಓಗೆ ತನಿಖೆ ನಡೆಸಲು ಸೂಚಿಸಿದ್ದಾರೆ. ಆದಷ್ಟು ಬೇಗ ಗಂಭೀರ ತನಿಖೆ ನಡೆಸಬೇಕೆಂದು ಸೂಚನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *