ಕೊರೊನಾ ಚಿಕಿತ್ಸೆಗೆ 12 ಲಕ್ಷ ಬಿಲ್- ಕಚೇರಿಯನ್ನೇ ಆಸ್ಪತ್ರೆಯನ್ನಾಗಿ ಬದಲಿಸಿದ ಉದ್ಯಮಿ

Public TV
2 Min Read

-ಸರ್ಕಾರಕ್ಕೆ ಆಸ್ಪತ್ರೆ ಹಸ್ತಾಂತರಿಸಿ, ಷರತ್ತು ಹಾಕಿದ ಉದ್ಯಮಿ
-84 ಬೆಡ್, 10 ಐಸಿಯು ಬೆಡ್ ವ್ಯವಸ್ಥೆ

ಗಾಂಧಿನಗರ/ಸೂರತ್: ಇಬ್ಬರಿಗೆ ಕೊರೊನಾ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಯೊಂದು ಬರೋಬ್ಬರಿ 12 ಲಕ್ಷ ರೂ. ಬಿಲ್ ಮಾಡಿದೆ. ತಮ್ಮ ಮತ್ತು ತಾಯಿ ಚಿಕಿತ್ಸೆಯ ಬಿಲ್ ಪಾವತಿಸಿದ ಉದ್ಯಮಿ, ಬಡವರಿಗಾಗಿ ತನ್ನ ಕಚೇರಿಯನ್ನೇ ಆಸ್ಪತ್ರೆಯಾಗಿ ಮಾರ್ಪಾಡು ಮಾಡಿಸಿದ್ದಾರೆ.

ಸೂರತ್ ರಿಯಲ್ ಎಸ್ಟೇಟ್ ವ್ಯಾಪಾರಿ ಖಾದರ್ ಶೇಖ್ ಕಚೇರಿಯನ್ನು ಆಸ್ಪತ್ರೆಯಾಗಿ ಮಾಡಿದ್ದಾರೆ. ತಾಯಿ ಮತ್ತು ತಮ್ಮನಿಗೆ ಕೊರೊನಾ ಸೋಂಕು ತಗುಲಿತ್ತು. ಅಮ್ಮ 45 ದಿನ ಮತ್ತು ತಮ್ಮ 24 ದಿನಗಳಲ್ಲಿ ಗುಣಮುಖರಾದರು. ಇಬ್ಬರಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆ 12 ಲಕ್ಷ ರೂ. ಬಿಲ್ ನೀಡಿತ್ತು. ಬಿಲ್ ಪಾವತಿಸಿದ ಬಳಿಕ ಬಡವರಿಗೆ ರೋಗ ಬಂದ್ರೆ ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತು. ಹಾಗಾಗಿ 84 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಿಸಿದೆ. 84 ನಾರ್ಮಲ್ ಬೆಡ್, 10 ಐಸಿಯು ಬೆಡ್, ಹಾಗೆ ಪ್ರತಿ ಹಾಸಿಗೆಗೂ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಖಾದರ್ ಹೇಳುತ್ತಾರೆ.

ತಮ್ಮನ ಕೊರೊನಾ ವರದಿ ನೆಗೆಟಿವ್ ಬಂದಿದ್ರೂ ಆತನ ಆರೋಗ್ಯದಲ್ಲಿ ಯಾವುದೇ ಸುಧಾರಣೆಗಳಿಲ್ಲ. ಆತ ಕೊರೊನಾ ಬಂದ ಬಳಿಕ ಇಳಿದು ಹೋಗಿದ್ದಾನೆ. ತಮ್ಮ ಮತ್ತು ತಾಯಿಗೆ ಯಾವುದೇ ಉತ್ತಮ ಚಿಕಿತ್ಸೆ ನೀಡಿರಲಿಲ್ಲ. 12 ಲಕ್ಷ ರೂ. ಬಿಲ್ ಪಡೆದ್ರೂ ಸಾಮಾನ್ಯ ರೋಗಿಗಳ ರೀತಿಯಲ್ಲಿ ಅವರಿಗೆ ಚಿಕಿತ್ಸೆ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಖಾದರ್ ಶೇಖ್ ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಶುಲ್ಕದಿಂದ ಶಾಕ್- ಬಡವರಿಗಾಗಿ ಉಚಿತ ಆಸ್ಪತ್ರೆ ತೆರೆದ ಬ್ಯುಸಿನೆಸ್ ಮ್ಯಾನ್

ತಮ್ಮನ ಡಿಸ್ಚಾರ್ಜ್ ಬಳಿಕ ಆತನ ಸ್ಥಿತಿ ನೋಡಿ ಆಸ್ಪತ್ರೆಯ ನಿರ್ಮಾಣದ ಕುರಿತು ಖಾದರ್ ನಿರ್ಧಾರ ತೆಗೆದುಕೊಂಡಿದ್ದರು. ಈ ಕುರಿತು ಸ್ಥಳೀಯ ಸಂಸದರನ್ನು ಭೇಟಿಯಾಗಿ ಅನುಮತಿ ಪಡೆದುಕೊಂಡಿದ್ದಾರೆ. ತಮ್ಮ ಬಳಿಯಲ್ಲಿರುವ ಮೂರು ಅಂತಸ್ತಿನ ಕಟ್ಟಡವಿದ್ದು, ಒಂದು ಫ್ಲೋರ್ ನಲ್ಲಿ ಕಚೇರಿಯನ್ನು ನಡೆಸುತ್ತಿದ್ದರು. ಕಚೇರಿಯನ್ನ ಆಸ್ಪತ್ರೆಯಾಗಿ ಪರಿವರ್ತನೆ ಮಾಡಿಕೊಡುವದಾಗಿ ಭರವಸೆ ನೀಡಿದ್ದರು.

ಸಂಸದರ ಮುಂದೆ ಖಾದರ್ ಕಂಡೀಷನ್: ನೀಡಿದ ಭರವಸೆಯಂತೆ ಖಾದರ್ ಕೇವಲ 20 ದಿನದಲ್ಲಿಯೇ ಆಸ್ಪತ್ರೆ ನಿರ್ಮಾಣ ಮಾಡಿದ್ದು, ಒಂದು ಫ್ಲೋರ್ ನಲ್ಲಿ ವೈದ್ಯಕೀಯ ಸಿಬ್ಬಂದಿಗೆ ಉಳಿದುಕೊಳ್ಳುವ ವ್ಯವಸ್ಥೆ ಸಹ ಕಲ್ಪಿಸಿದ್ದಾರೆ. ಆಸ್ಪತ್ರೆಯನ್ನ ಸರ್ಕಾರಕ್ಕೆ ಹಸ್ತಾಂತರಿಸಿದ ಬಳಿಕ ಇಲ್ಲಿ ಸಂಪೂರ್ಣ ಚಿಕಿತ್ಸೆ ಉಚಿತವಾಗಿ ನೀಡಬೇಕು. ರೋಗಿಗಳಿಗೆ ಔಷಧಿ ಸಹ ಉಚಿತವಾಗಿ ಕೊಡಬೇಕು ಎಂಬ ಷರತ್ತು ಖಾದರ್ ಸಂಸದರ ಮುಂದೆ ಇಟ್ಟಿದ್ದರು. ಖಾದರ್ ಷರತ್ತನ್ನ ಸರ್ಕಾರ ಸಹ ಒಪ್ಪಿಕೊಂಡಿದೆ.

ಆಸ್ಪತ್ರೆ ಹಸ್ತಾಂತರಿಸಿದ ಬಳಿಕ ಮಾತನಾಡಿರುವ ಖಾದರ್, ಮೊದಲ ಬಾರಿಗೆ ಮನಸ್ಸಿಗೆ ಒಂದು ರೀತಿಯ ಶಾಂತಿ ಸಿಕ್ಕಿದೆ. ಮತ್ತೊಬ್ಬರ ಜೀವನಕ್ಕೆ ನೆರವಾಗಿದ್ದಕ್ಕೆ ಸಂತೋಷವಾಗುತ್ತಿದೆ. ಯಾರೂ ಬೇಕಾದ್ರೂ ಇಲ್ಲಿಗೆ ಬಂದು ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದ್ದು, ಬಡವರಿಗೆ ನಮ್ಮ ಮೊದಲ ಆದ್ಯತೆ. ಇಲ್ಲಿಗೆ ಬರೋ ರೋಗಿಗಳು ಟೂಥ್‍ಪೇಸ್ಟ್, ಬ್ರಶ್, ಸಾಬೂನು ಮತ್ತು ಕೊರೊನಾ ತೆಗದುಕೊಂಡು ಬರಬೇಕು. ಚಿಕಿತ್ಸೆಯ ಜೊತೆಗೆ ಎಲ್ಲ ಸೌಲಭ್ಯವೂ ಸಿಗಲಿದೆ ಎಂದು ತಿಳಿಸಿದರು.

ಕೊರೊನಾ ಒಂದು ಹಂತದವರೆಗೂ ನಿಯಂತ್ರಣಕ್ಕೆ ಸಿಗೋವರೆಗೂ ಈ ಆಸ್ಪತ್ರೆ ಸಾರ್ವಜನಿಕರ ಸೇವೆಗೆ ಲಭ್ಯವಿರಲಿದೆ. ಇದು ವರ್ಷ ಅಥವಾ ಮೂರು ವರ್ಷವಾದ್ರೂ ಕಟ್ಟಡವನ್ನ ನಮ್ಮ ವಶಕ್ಕೆ ಪಡೆಯಲ್ಲ ಹಾಗೂ ಸರ್ಕಾರದಿಂದ ಬಾಡಿಗೆ ತೆಗೆದುಕೊಳ್ಳಲ್ಲ ಎಂದು ಖಾದರ್ ಹೇಳಿದ್ದಾರೆ. ಆಸ್ಪತ್ರೆಯ ಜವಾಬ್ದಾರಿಯನ್ನ ನಿವೃತ್ತ ಡಿಎಸ್‍ಪಿ ಸಿರಾಜ್ ಜಾಬಾ ಅವರಿಗೆ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *