ಕೊರೊನಾ ಚಿಕಿತ್ಸೆಗೆ ಪಾವತಿಸಿದ ಎಲ್ಲರ ಹಣವನ್ನು ಸರ್ಕಾರ ಮರುಪಾವತಿಸಲಿ: ಖಾದರ್

Public TV
1 Min Read

ಮಂಗಳೂರು: ಕೊರೋನಾ ಪಾಸಿಟಿವ್ ಆದವರಿಗೆ ಎಲ್ಲೂ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿಲ್ಲ. ಹೀಗಾಗಿ ಕೋವಿಡ್ ಚಿಕಿತ್ಸೆಗಾಗಿ ಹಣ ಪಾವತಿಸಿದ ಎಲ್ಲರ ಹಣವನ್ನು ರಾಜ್ಯ ಸರ್ಕಾರ ಮರು ಪಾವತಿಸಬೇಕು ಎಂದು ಮಾಜಿ ಆರೋಗ್ಯ ಸಚಿವ, ಶಾಸಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಕೊರೋನಾ ಪಾಸಿಟಿವ್ ಆದವರಿಗೆ ಎಲ್ಲೂ ಉಚಿತ ಚಿಕಿತ್ಸೆ ಸಿಗುತ್ತಿಲ್ಲ. ಅವರೆಲ್ಲರ ಹಣವನ್ನು ಮರು ಪಾವತಿಸಲು ಸಿಎಂ ಪರಿಹಾರ ನಿಧಿಯಿಂದ ತಕ್ಷಣ ಹಣ ಬಿಡುಗಡೆ ಮಾಡಬೇಕು. ಆಗ ಆಸ್ಪತ್ರೆಗಳು ಎಷ್ಟು ಬಿಲ್ ಮಾಡಿದೆ ಅನ್ನೋದು ಸರ್ಕಾರಕ್ಕೆ ಗೊತ್ತಾಗುತ್ತದೆ ಎಂದರು.

ಸರ್ಕಾರ ಈ ಬಗ್ಗೆ ತಕ್ಷಣ ಕಾರ್ಯ ಪ್ರವೃತವಾಗಬೇಕೆಂದು ಅವರು ಒತ್ತಾಯಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೊರೊನಾ ಪಾಸಿಟಿವ್ ಹಾಗೂ ಕೊರೊನಾದಿಂದ ಸಾವನ್ನಪ್ಪುವ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಎಲ್ಲೆಡೆ ಲಾಕ್‍ಡೌನ್ ಸಡಿಲಿಸಿದ್ದಾರೆ. ಇತ್ತೀಚೆಗೆ ಕೊರೊನಾ ಟೆಸ್ಟಿಂಗ್ ಕೂಡ ಕಡಿಮೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಬೀದಿ ವ್ಯಾಪಾರಿಗಳು, ಇತರೆ ಎಲ್ಲಾ ರೀತಿಯ ವ್ಯಾಪಾರಿಗಳು, ಲಾರಿ, ಬಸ್ ಚಾಲಕರಿಗೆ ಕೊರೊನಾ ರಿಪೋರ್ಟ್ ತರಲು ಆದೇಶಿಸಿ. ಆಗ ಎಲ್ಲರೂ ತಪಾಸಣೆ ಮಾಡುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.

Share This Article
Leave a Comment

Leave a Reply

Your email address will not be published. Required fields are marked *