ಕೊರೊನಾ ಕರಿನೆರಳು- ಇಂದು ಪ್ರಾರಂಭವಾಗಬೇಕಿದ್ದ ಮೀನುಗಾರಿಕೆ ಸಂಪೂರ್ಣ ಬಂದ್!

Public TV
2 Min Read

ಕಾರವಾರ: 61 ದಿನಗಳ ನಿರ್ಬಂಧದ ನಂತರ ಇಂದು ಪ್ರಾರಂಭವಾಗಬೇಕಿದ್ದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಮೀನುಗಾರಿಕೆ ಕೊರೊನಾ ಹೆಚ್ಚಳದಿಂದ ಬಂದ್ ಆಗಿದೆ. ಕೇರಳ ಮತ್ತು ಇತರೆ ರಾಜ್ಯಗಳಲ್ಲಿ ಕೊರೊನಾ ಹೆಚ್ಚಾದ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಕರಾವಳಿಗೂ ತಟ್ಟಿದ್ದು, ಇದೀಗ ಮೀನುಗಾರರೇ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ.

ಬಂದ್ ಮಾಡಲು ಕಾರಣ ಏನು?
ಉತ್ತರ ಕನ್ನಡ ಜಿಲ್ಲೆಯ ಮೀನುಗಾರಿಕೆ ಬಹುತೇಕ ಹೊರ ರಾಜ್ಯಗಳ ಮೀನುಗಾರಿಕಾ ವಹಿವಾಟಿನೊಂದಿಗೆ ಬೆರೆತಿದೆ. ಜಿಲ್ಲೆಯ ಕಾರವಾರದ ಬೈತಕೋಲ್, ಹೊನ್ನಾವರದ ಕಾಸರಕೋಡು ಬಂದರಿನಲ್ಲಿ ನಡೆಯುವ ಮೀನುಗಾರಿಕೆ ಕೇರಳ, ಆಂಧ್ರ, ಗೋವಾ ರಾಜ್ಯಗಳೊಂದಿಗೆ ವ್ಯವಹಾರಿಕ ಸಂಪರ್ಕ ಹೊಂದಿದೆ. ಕೇರಳ ರಾಜ್ಯದಲ್ಲಿ ಲಾಕ್‍ಡೌನ್ ಇರುವುದರಿಂದ ಮೀನುಗಾರಿಕೆ ಸಹ ಬಂದ್ ಆಗಿದೆ.

ಜಿಲ್ಲೆಯ ಭಾಗದ ಮೀನುಗಾರರು ಸಹ ಕೇರಳ, ಗೋವಾ, ಮಹಾರಾಷ್ಟ್ರ, ಆಂಧ್ರ ಭಾಗಗಳಿಗೆ ಆಳ ಸಮುದ್ರದ ಮೀನುಗಾರಿಕೆಗೆ ತೆರಳುತ್ತಾರೆ. ಹೀಗಾಗಿ ಜಿಲ್ಲೆಯ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಆದರೆ ಇದುವರೆಗೂ ಜಿಲ್ಲೆಯಲ್ಲಿ ಮೀನುಗಾರರಿಗೆ ವ್ಯಾಕ್ಸಿನ್ ಕೊರತೆ ಹಿನ್ನೆಲೆಯಲ್ಲಿ ಬಹುತೇಕರಿಗೆ ಮೊದಲ ಡೋಸ್ ಸಹ ಆಗಿಲ್ಲ. ಮುಖ್ಯಮಂತ್ರಿಗಳೇ ಮೀನುಗಾರರಿಗೆ ಪ್ರಾಮುಖ್ಯತೆ ಆಧಾರದಲ್ಲಿ ಕರಾವಳಿ ಭಾಗದ ಪ್ರತಿ ತಾಲೂಕಿಗೆ ಮೂರು ಸಾವಿರ ಡೋಸ್ ಮೀಸಲಿಟ್ಟು ನೀಡಲು ಆದೇಶಿಸಿದ್ದಾರೆ. ವ್ಯಾಕ್ಸಿನ್ ಕೊರತೆಯಿಂದ ಮೀನುಗಾರರಿಗೆ ವ್ಯಾಕ್ಸಿನ್ ಸಿಗುತ್ತಿಲ್ಲ. ಇದರ ಜೊತೆಗೆ ಕೇರಳದಿಂದ ರಫ್ತಾಗುವ ಸಿಗಡಿ ಮೀನಿನ ದರ ಸಹ ನಿಗದಿಯಾಗಿಲ್ಲ. ಈಗಿರುವ ದರ ಸಹ ಕಮ್ಮಿ ಇರುವುದರಿಂದ ಸಮುದ್ರದಲ್ಲಿ ಮತ್ಸ್ಯ ಭೇಟಿಗೆ ಹೋದರೆ ನಷ್ಟ ಹೊಂದುವ ಸಾಧ್ಯತೆ ಸಹ ಇರುವುದರಿಂದ ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡ ಮೀನುಗಾರರು ಇದೀಗ ಮೀನುಗಾರಿಕೆಯನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ.

ಮೀನುಗಾರರು ಹೇಳುವುದೇನು?
ಸದ್ಯ ಕೊರೊನಾ ಹೆಚ್ಚಳವಾಗಿದೆ ಜೊತೆಗೆ ಮೀನುಗಾರಿಕೆಗೆ ತೆರಳಲು ವ್ಯಾಕ್ಸಿನ್ ಪಡೆದುಕೊಳ್ಳಲು ವಿಳಂಬವಾಗಿದೆ. ಮುಖ್ಯಮಂತ್ರಿಗಳ ಆದೇಶ ಇದ್ದರೂ ಸಹ ತಮಗೆ ವ್ಯಾಕ್ಸಿನ್ ನೀಡುವಲ್ಲಿ ವಿಳಂಬ ಆಗುತ್ತಿದೆ. ಹೀಗಾಗಿ ನಿಯಮದ ಪ್ರಕಾರ ಇತರೆ ರಾಜ್ಯಗಳಲ್ಲಿ ಮೀನುಗಾರಿಕೆ ಮಾಡಲಾಗುತ್ತಿಲ್ಲ. ಡಿಸೇಲ್ ದರ ಹೆಚ್ಚಳ ವಿಧಿ ಆದ್ರೆ ಸದ್ಯ ರಫ್ತಾಗುವ ಮೀನಿನ ಬೆಲೆಯು ಸಹ ಕಮ್ಮಿ ಇದೆ. ಕೊರೊನಾ ಭಯದಿಂದ ಮೀನುಗಾರ ಕಾರ್ಮಿಕರು ಮೀನುಗಾರಿಕೆಗೆ ಬರುತ್ತಿಲ್ಲ. ಹೀಗಾಗಿ ನಷ್ಟ ಹೊಂದುವುದಕ್ಕಿಂತ ವ್ಯವಸ್ಥೆ ಸರಿ ಆಗುವವರೆಗೆ ಬಂದ್ ಮಾಡಿ ಆಗುವ ನಷ್ಟ ತಪ್ಪಿಸಿಕೊಳ್ಳಬಹುದು ಎಂದು ಕಾರವಾರದ ಬೈತಕೋಲಿನಲ್ಲಿ ಮೀನುಗಾರಿಕಾ ಬೋಟ್ ಹೊಂದಿದ ಪ್ರಶಾಂತ್ ಹೇಳುತ್ತಾರೆ. ಇದನ್ನೂ ಓದಿ: ಕಾರವಾರ ಬಂದರು ವಿಸ್ತರಣೆ- ಹೈಕೋರ್ಟ್ ಮಹತ್ವದ ತೀರ್ಪು

ಸದ್ಯ ಜಿಲ್ಲೆಯ ಮೀನುಗಾರರಿಗೆ ವ್ಯಾಕ್ಸಿನ್ ಸಂಪೂರ್ಣ ಆಗುವವರೆಗೂ ಮೀನುಗಾರರು ಮೀನುಗಾರಿಕೆಗೆ ತೆರಳುವುದು ಅನುಮಾನವಾಗಿದೆ. ಒಟ್ಟಿನಲ್ಲಿ ಕೊರೊನಾ ಕರಿ ಛಾಯೆ ಇದೀಗ ಮತ್ತೆ ಮೀನುಗಾರರನ್ನು ಬಾಧಿಸುತ್ತಿದೆ. ಇದನ್ನೂ ಓದಿ: ಪ್ರವಾಹ ಹಾನಿ ವೀಕ್ಷಿಸಲು ಬಾರದ ಕಾಗೇರಿ, ಕ್ಷೇತ್ರದಲ್ಲಿ ಸಂಸದರೂ ನಾಪತ್ತೆ

Share This Article
Leave a Comment

Leave a Reply

Your email address will not be published. Required fields are marked *