ಪುತ್ರಿಯರಿಂದಲೇ ಕೊರೊನಾದಿಂದ ಮೃತ ತಂದೆಯ ಅಂತ್ಯಕ್ರಿಯೆ

Public TV
1 Min Read

ದಾವಣಗೆರೆ: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಮೃತದೇಹವನ್ನು ಕುಟುಂಬಸ್ಥರು ಅಂಬುಲೆನ್ಸ್ ನಲ್ಲೇ ಬಿಟ್ಟುಹೋಗುವ ಪ್ರಕರಣಗಳನ್ನು ನೋಡಿದ್ದೇವೆ. ಕೆಲವರು ಅಪ್ಪನ ಹಣ ಬೇಕು, ಅಪ್ಪ ಬೇಡ ಎಂದವರೂ ಇದ್ದಾರೆ. ಇಂತಹವರ ಮಧ್ಯೆ ಕೋವಿಡ್ ನಿಂದ ಮೃತರಾದ ತಂದೆಯ ಶವದ ಅಂತ್ಯಕ್ರಿಯೆಯನ್ನು ಇಬ್ಬರು ಹೆಣ್ಣುಮಕ್ಕಳು ಮಾಡಿ ಜವಾಬ್ದಾರಿ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಗಾಂಧಿ ವೃತ್ತದಲ್ಲಿರುವ ಶಾಸ್ತ್ರೀ ಬೇಕರಿ ಮಾಲೀಕರಾದ ಶ್ರೀಕಂಠ ಅವರು ಕೋವಿಡ್ ನಿಂದ ಬಾಪೂಜಿ ಆಸ್ಪತ್ರೆಯಲ್ಲಿ ಅಸುನೀಗಿದ್ದು, ಅವರ ಇಬ್ಬರು ಹೆಣ್ಣು ಮಕ್ಕಳು, 12 ದಿನ ಕೋವಿಡ್ ಸೆಂಟರ್ ನಲ್ಲಿ ತಂದೆಯ ಆರೈಕೆ ಮಾಡಿ, ನಿಧನದ ನಂತರ ದೇಹವನ್ನು ಅವರೇ ಅಂಬುಲೆನ್ಸ್ ಮೂಲಕ ಮನೆಯ ಹತ್ತಿರ ತೆಗೆದುಕೊಂಡು ಹೋಗಿ, ತಾಯಿ, ಅಜ್ಜಿ ಕಡೆಯಿಂದ ಪೂಜೆ ಮಾಡಿಸಿ, ನಂತರ ತಂದೆಯ ಶವಕ್ಕೆ ಆಗ್ನಿ ಸ್ಪರ್ಶ ಮಾಡಿ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ.

ಕೊರೊನಾ ರೋಗಿಗಳನ್ನು ಕುಟುಂಬಸ್ಥರು, ಸ್ನೇಹಿತರು ಎಂಬ ಕನಿಕರ ಇಲ್ಲದೆ, ಮನುಷ್ಯತ್ವ ಮರೆತು ನೋಡುವವರ ಮಧ್ಯೆ 17, 18 ವರ್ಷದ ಈ ಇಬ್ಬರು ಹೆಣ್ಣುಮಕ್ಕಳು ಧೈರ್ಯವಾಗಿ ಯಾವುದೇ ಆಳುಕಿಲ್ಲದೆ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *