ಕೊರೊನಾದಿಂದ ಮೃತ ವಾರಿಯರ್ಸ್ ಮಕ್ಕಳಿಗೆ MBBS ನಲ್ಲಿ 5 ಸೀಟ್ ಮೀಸಲು

Public TV
1 Min Read

ನವದೆಹಲಿ: ಆಶಾ ಕಾರ್ಯಕರ್ತೆಯರು, ನರ್ಸ್, ವೈದ್ಯರಿಂದ ಹಿಡಿದು ಕೊರೊನಾದಿಂದ ಸಾವನ್ನಪ್ಪಿದ ವಾರಿಯರ್ಸ್ ಮಕ್ಕಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಕೋರ್ಸ್‍ಗೆ ಕಡ್ಡಾಯವಾಗಿ 5 ಸೀಟ್ ಮೀಸಲಿಡಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ಘೋಷಿಸಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ನಿಯಮ ಜಾರಿಗೆ ಬರಲಿದ್ದು, ಕೊರೊನಾ ಕೆಲಸ ಮಾಡುತ್ತಿರುವಾಗ ಅಥವಾ ಕೊರೊನಾ ಸಂಬಂಧಿ ಯಾವುದೇ ಕೆಲಸ ಮಾಡುತ್ತಿರುವಾಗ ಆಶಾ ಕಾರ್ಯಕರ್ತೆಯರು, ನರ್ಸ್, ವೈದ್ಯರು ಸೇರಿದಂತೆ ಕೊರೊನಾ ವಾರಿಯರ್ಸ್ ಮಕ್ಕಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಹಾಗೂ ಬಿಡಿಎಸ್ ಪ್ರವೇಶಕ್ಕೆ 5 ಸೀಟ್ ಮೀಸಲಿರಿಸಬೇಕು. ನ್ಯಾಷನಲ್ ಕೋಟಾದ ಅಡಿಯಲ್ಲಿ ಮೆರಿಟ್ ಆಧಾರದ ಮೇಲೆ ಅವರಿಗೆ ಪ್ರವೇಶ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಹರ್ಷವರ್ಧನ್, ಕೊರೊನಾ ವಾರಿಯರ್ಸ್ ತ್ಯಾಗಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಯೋಜನೆ ಘೋಷಿಸಲಾಗಿದೆ. ಕರ್ತವ್ಯ, ಮಾನವೀಯತೆಯಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಎಲ್ಲ ಕೊರೊನಾ ವಾರಿಯರ್ಸ್ ತ್ಯಾಗವನ್ನು ಗೌರವಿಸುವುದು ಇದರ ಉದ್ದೇಶವಾಗಿದೆ ಎಂದರು.

ಎಂಬಿಬಿಎಸ್ ಪ್ರವೇಶವನ್ನು ನೀಟ್ ರ್ಯಾಂಕಿಂಗ್ ಆಧಾರದ ಮೇಲೆ ಮಾಡಲಾಗುತ್ತದೆ. ಭಾರತದಲ್ಲಿನ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಪದವಿ, ದಂತ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ನೀಟ್ ಪ್ರವೇಶ ಪರೀಕ್ಷೆ ಕಡ್ಡಾಯವಾಗಿದೆ. ಪ್ರತಿ ವರ್ಷ ನೀಟ್ ಪರೀಕ್ಷೆ ನಡೆಯುತ್ತಿದೆ. ಪ್ರತಿ ವರ್ಷ ಸುಮಾರು 15 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *