ಕೊರೊನಾಗೆ ಸ್ಯಾಂಡಲ್‍ವುಡ್ ಹಿರಿಯ ಕಲಾವಿದ ಬಲಿ

Public TV
1 Min Read

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಹುಲಿವಾನ್ ಗಂಗಾಧರಯ್ಯ (70) ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೊರೊನಾ ಕಾರಣದಿಂದ ಸಿನಿರಂಗದ ಕಲಾವಿದರು, ತಂತ್ರಜ್ಞಾನರು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆಯೇ ಹಿರಿಯ ಪೋಷಕ ನಟ ಹುಲಿವಾನ್ ಗಂಗಾಧರಯ್ಯ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಿನ್ನೆ ರಾತ್ರಿ 11 ಗಂಟೆ ವೇಳೆಗೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.

118ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಗೂ 1500ಕ್ಕೂ ಹೆಚ್ಚು ನಾಟಕಗಳಲ್ಲಿ ಹುಲಿವಾನ್ ಗಂಗಾಧರಯ್ಯ ಅವರು ನಟಿಸಿದ್ದರು. ಇತ್ತೀಚಿನವರೆಗೂ ಕೂಡ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಚಿತ್ರೀಕರಣದ ಸಂದರ್ಭದಲ್ಲಿ ಇವರಿಗೆ ಜ್ವರ ಕಾಣಿಸಿಕೊಂಡಿತ್ತು ಎನ್ನಲಾಗಿದ್ದು, ಆ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.

ಶಬ್ದವೇದಿ, ಕುರಿಗಳು ಸರ್ ಕುರಿಗಳು, ನೀರ್ ದೋಸೆ, ಅಪ್ಪು, ಕ್ವಾಟ್ಲೆ ಸತೀಶ, ಕರ್ವ, ಪಾಪಿಗಳ ಲೋಕದಲ್ಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟ ಹುಲಿವಾನ್ ಗಂಗಾಧರಯ್ಯ ನಟಿಸಿದ್ದರು.

ಉಳಿದಂತೆ ನಿನ್ನೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದ ಕೋವಿಡ್ ಬುಲೆಟಿನ್‍ನಲ್ಲಿ ಕೊರೊನಾ ಸೋಂಕಿಗೆ 115 ಮಂದಿ ಮೃತಪಟ್ಟಿದ್ದರು. ಇದರೊಂದಿಗೆ ಸಾವಿನ ಸಂಖ್ಯೆ 1,147 ಕ್ಕೇರಿತ್ತು. ಬೆಂಗಳೂರು 75, ಧಾರವಾಡ 8, ಬಳ್ಳಾರಿ 3, ಬೆಳಗಾವಿ 4, ಮೈಸೂಋಉ 7, ಉಡುಪಿ 3, ಉತ್ತರ ಕನ್ನಡ 2,ದಾವಣಗೆರೆ 2, ಮಂಡ್ಯದಲ್ಲಿ ಇಬ್ಬರು ಮೃತಪಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *