ಕೊರೊನಾಗೆ ಕ್ಯಾಬಿನೆಟ್ ಸಚಿವೆ ಕಮಲ್ ರಾಣಿ ವರುಣ್ ಬಲಿ

Public TV
1 Min Read

ಲಕ್ನೋ: ಕೊರೊನಾದಿಂದ ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವೆ ಕಮಲ್ ರಾಣಿ ವರುಣ್ ( 62) ಇಂದು ನಿಧನರಾಗಿದ್ದಾರೆ.

ಕಮಲ್ ರಾಣಿ ವರುಣ್ ಅವರು ಜುಲೈ 18 ರಂದು ಕೊರೊನಾ ಟೆಸ್ಟ್ ಮಾಡಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿತ್ತು. ಲಕ್ನೋದ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕಮಲ್ ರಾಣಿ ವರುಣ್ ಅವರು ನಿಧನರಾಗಿದ್ದಾರೆ.

ಕಮಲ್ ರಾಣಿ ವರುಣ್ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕಮಲ್ ರಾಣಿ ವರುಣ್ ಅವರ ಪಾರ್ಥಿವ ಶರೀರವನ್ನು ಲಕ್ನೋದಿಂದ ಕಾನ್ಪುರಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲದೇ ಕೊರೊನಾ ನಿಯಮದ ಪ್ರಕಾರ ಅಂತ್ಯಕ್ರಿಯೆ ಮಾಡಲಾಗುತ್ತದೆ.

ಸಚಿವೆಯ ನಿಧನಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. “ಕ್ಯಾಬಿನೆಟ್ ಸಚಿವೆ ಕಮಲಾ ರಾಣಿ ವರುಣ್ ಕೋವಿಡ್ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ನಿಧನರಾಗಿದ್ದಾರೆ. ಅವರು ಸಮಾಜ ಸೇವಕಿಯಾಗಿದ್ದು, ಕ್ಯಾಬಿನೆಟ್‍ನಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದರು. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ” ಎಂದಿದ್ದಾರೆ.

ಕಮಲ್ ರಾಣಿ ವರುಣ್ ಅವರು 11 ಮತ್ತು 12ನೇ ಅವಧಿಯಲ್ಲಿ ಲೋಕಸಭೆಯ ಸದಸ್ಯರಾಗಿದ್ದರು. ಅವರು 1996-97ರವರೆಗೆ ಕಾರ್ಮಿಕ ಮತ್ತು ಕಲ್ಯಾಣ ಸಮಿತಿ ಮತ್ತು ಕೈಗಾರಿಕಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ 1997 ರಲ್ಲಿ ಮಹಿಳಾ ಸಬಲೀಕರಣ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. 1998 ರಲ್ಲಿ ಅವರು ಎರಡನೇ ಬಾರಿಗೆ ಸಂಸತ್ತಿಗೆ ಮರು ಆಯ್ಕೆಯಾಗಿದ್ದರು. 1998 ರಿಂದ 1999 ರವರೆಗೆ ವರುಣ್ಅ ವರು ಕಾರ್ಮಿಕ ಮತ್ತು ಕಲ್ಯಾಣ ಸಮಿತಿ ಹಾಗೂ ಪ್ರವಾಸೋದ್ಯಮ ಸಚಿವಾಲಯದ ಸಮಾಲೋಚನಾ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *