ಕೊರಗಜ್ಜನ ಆರಾಧನೆಯಲ್ಲೇ ಬದುಕು ಕಟ್ಟಿಕೊಂಡ ಖಾಸಿಂ

Public TV
2 Min Read

– ಹಲವು ಬಿಕ್ಕಟ್ಟಿನಿಂದ ಪಾರು

ಮಂಗಳೂರು: ಸ್ವಾಮಿ ಕೊರಗಜ್ಜ ತುಳುನಾಡಿನ ಆರಾಧ್ಯ ಹಾಗೂ ಕಾರಣಿಕ ದೈವವೆಂದೇ ಸುಪ್ರಸಿದ್ಧ. ಕೊರಗಜ್ಜ ಎಲ್ಲಾ ಜಾತಿ ಧರ್ಮದವರಿಂದಲೂ ಆರಾಧನೆಗೊಳ್ಳುತ್ತಿದ್ದಾರೆ ಅನ್ನೋದು ಮತ್ತೆ ಸಾಬೀತಾಗಿದೆ. ಮುಸ್ಲಿಂ ಧರ್ಮದ ಹಿರಿಯರೊಬ್ಬರಿಂದ ಆರಾಧನೆಗೊಳ್ಳುತ್ತಿರೋದು ಇದೀಗ ಕೊರಗಜ್ಜ ಎಲ್ಲೆಡೆ ಇದ್ದಾರೆ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.

ಮಂಗಳೂರಿನ ಹೊರವಲಯದ ಮೂಲ್ಕಿಯ ಬಳ್ಕುಂಜೆ ಗ್ರಾಮದ ಕವತ್ತಾರು ಎಂಬಲ್ಲಿ ಸುಮಾರು 19 ವರ್ಷಗಳಿಂದ 65ರ ಹರೆಯದ ಪಿ.ಖಾಸಿಂ ಸಾಹೇಬ್ ಎಂಬವರು ಕೊರಗಜ್ಜ ಹಾಗೂ ಪರಿವಾರ ದೈವಗಳನ್ನು ಸದ್ದಿಲ್ಲದೆ ಪೂಜಿಸಿಕೊಂಡು ಬರುತ್ತಿದ್ದಾರೆ. ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ಖಾಸಿಂ ತಮ್ಮ 30ರ ಹರೆಯದಲ್ಲಿ ಗರಗಸ ಹಿಡಿದು ಮರಗಳನ್ನು ಸೀಳುವ ಕೆಲಸಕ್ಕೆಂದು ಕರ್ನಾಟಕದ ಸುಳ್ಯ, ಬಳ್ಕುಂಜೆ ಬಳಿಕ ಕುಟುಂಬ ಸಹಿತ ಮುಲ್ಕಿಯ ಕವತ್ತಾರಿಗೆ ಬಂದು ನೆಲೆ ನಿಂತರು.

35 ವರ್ಷಗಳ ಹಿಂದೆ ಸರಕಾರಿ ಜಾಗದಲ್ಲಿ ಜೋಪಡಿ ಕಟ್ಟಿಕೊಂಡು ಪತ್ನಿ ಹಾಗೂ ಐವರು ಮಕ್ಕಳ ಜೊತೆ ಸಂಸಾರ ಆರಂಭಿಸಿದ್ದರು. ಸ್ವಲ್ಪ ಸಮಯದ ನಂತರ ಇವರ ಕುಟುಂಬದಲ್ಲಿ ಸಮಸ್ಯೆಗಳು ಎದುರಾದವು. ಮಗ ತೀವ್ರ ಅನಾರೋಗ್ಯಕ್ಕೊಳಗಾದ, ಹೆಣ್ಮಕ್ಕಳಿಗೆ ಮದುವೆ ಕೂಡಿ ಬರುತ್ತಿರಲಿಲ್ಲ, ಇವರ ಕಾಲು ಊನವಾಗಿ ನಡೆಯದ ಪರಿಸ್ಥಿತಿ ಬಂತು. ಕೇರಳಕ್ಕೆ ಹೋಗಿ ಸಮಸ್ಯೆ ಹೇಳಿದಾಗ ಜಾಗದಲ್ಲಿ ಸಮಸ್ಯೆ ಇದೆ ಎಂದು ಗೊತ್ತಾಯಿತು. ಇದನ್ನೂ ಓದಿ: ಕಾಮಿಡಿ ಕಿಲಾಡಿ ಗೆಲ್ಲಲು ಕೊರಗಜ್ಜ ದೈವದ ಆಶೀರ್ವಾದ: ರಾಕೇಶ್ ಪೂಜಾರಿ

ಇಲ್ಲಿಗೆ ಬಂದಾಗ ಅದು ಕೊರಗಜ್ಜನ ನೆಲೆ. ಒಂದೋ ಕೊರಗಜ್ಜನನ್ನು ನಂಬಬೇಕು, ಇಲ್ಲವೇ ಜಾಗ ಖಾಲಿ ಮಾಡಬೇಕೆಂದು ದರ್ಶನ ಪಾತ್ರಿ ಹೇಳಿದ್ದರು. ಬೇರೆ ದಾರಿ ಇಲ್ಲದೆ ಕೊರಗಜ್ಜನನ್ನು ನಂಬಲು ಆರಂಭಿಸಿದೆ ಎಂದು ಖಾಸಿಂ ಹೇಳುತ್ತಾರೆ. ದೈವಗಳಿಗೆ ಗುಡಿ ನಿರ್ಮಿಸಿ ಪ್ರತಿದಿನ ಪೂಜೆ ಮಾಡುತ್ತಾರೆ. ಸಮಸ್ಯೆ ಹೇಳಿಕೊಂಡು ಬರುವವರಿಗೆ ಕೊರಗಜ್ಜನ ಮಾರ್ಗದರ್ಶನದಂತೆ ಕರಿಗಂಧ ನೀಡುತ್ತಾರೆ.

ಬಪ್ಪನಾಡು ಕ್ಷೇತ್ರದ ಉಳ್ಳಾಲ್ತಿ, ಕೊರತಿ, ಗುಳಿಗ ಹಾಗೂ ಕೊರಗಜ್ಜನನ್ನು ಆರಾಧಿಸಲಾಗುತ್ತದೆ. ನಿತ್ಯ ದೀಪ ಸೇವೆ, ಸಂಕ್ರಾಂತಿಯಂದು ಸಲ್ಲಿಸುವ ಪೂಜೆ, 2-3 ವರ್ಷಗಳಿಗೊಮ್ಮೆ ಅನುಕೂಲಕ್ಕೆ ತಕ್ಕ ಹಾಗೆ ಕೋಲ, ಹರಕೆ ರೂಪದ ಪೂಜೆ ಸಲ್ಲಿಸಲಾಗುತ್ತದೆ. ಯಾವುದೇ ಧರ್ಮ ಭೇದವಿಲ್ಲದೆ ಭಕ್ತರು ಆಗಮಿಸಿ ಹರಕೆ ಸಲ್ಲಿಸುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *