ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಆಶ್ಲೇಷ ಮಳೆ ಆರ್ಭಟಿಸುತ್ತಿದೆ. ಮಡಿಕೇರಿ ತಾಲೂಕಿನ ಅಬ್ಬಿಯಾಲ ಬಳಿ ಭಾರಿ ಭೂಕುಸಿತವಾಗಿದೆ. ಪರಿಣಾಮ ಮಡಿಕೇರಿ ಸಿದ್ದಾಪುರ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿದೆ.
ಅಬ್ಬಿಯಾಲ ಚೆಟ್ಟಳ್ಳಿಯ ನಡುವಿನ ಈ ಮಾರ್ಗದಲ್ಲಿ ರಸ್ತೆಯ ಒಂದು ಬದಿ ಸಂಪೂರ್ಣ ಕುಸಿದು ಸುಮಾರು 50 ಅಡಿ ಆಳಕ್ಕೆ ಬಿದ್ದಿದೆ. ವಾಹನಗಳ ಓಡಾಟ ಮುಂದುವರಿದಲ್ಲಿ ಮತ್ತೆ ಇಡೀ ರಸ್ತೆಯೇ ಕುಸಿದು ಹೋಗುವ ಸಾಧ್ಯತೆ ಇದೆ. ಹೀಗಾಗಿ ವಾಹನಗಳ ಸಂಚಾರ ಬಂದ್ ಮಾಡಿರುವುದರಿಂದ ಮಡಿಕೇರಿ ಸಿದ್ದಾಪುರ ಸಂಪರ್ಕ ಕಡಿತವಾಗಿದೆ.
ಮತ್ತೊಂದಡೆ ಸೋಮವಾರಪೇಟೆ ತಾಲೂಕಿನ ಮಾದಾಪುರ ಗರ್ವಾಲೆ ಮಾರ್ಗದಲ್ಲಿ ಕಿರುದಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪ್ರವಾಹದ ನೀರಿಗೆ ಕೊಚ್ಚಿಹೋಗಿದೆ. ಹಟ್ಟಿ ಹೊಳೆಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು ನೀರಿನ ಸೆಳೆತಕ್ಕೆ ಕಿರುದಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿಹೋಗಿದ್ದು, ಅವಾಂತರ ಸೃಷ್ಟಿಯಾಗಿದೆ.
ಕಳೆದ ಎರಡು ವರ್ಷಗಳಲ್ಲೂ ಈ ರಸ್ತೆ ಮಳೆಗಾಲದಲ್ಲಿ ಕೊಚ್ಚಿಹೋಗುತ್ತಿದ್ದು, ಈ ಭಾರಿಯೂ ರಸ್ತೆ ಕೊಚ್ಚಿಹೋಗಿರುವುದು ಜನರಿಗೆ ಆತಂಕ ಮೂಡಿಸಿದೆ.
ಕೊಡಗಿನಲ್ಲಿ ಧಾರಾಕಾರ ಮಳೆ- ಉಕ್ಕಿ ಹರಿಯುತ್ತಿರೋ ಕಾವೇರಿ https://t.co/nxB7anPChs#Madikeri #Kodagu #Rain #KaveriRiver
— PublicTV (@publictvnews) August 5, 2020