ಕೊಡಗಿನಲ್ಲಿ ಮಳೆ ಆರ್ಭಟ- ಮನೆಗಳಿಗೆ ಹಾನಿ

Public TV
1 Min Read

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿರುಗಾಳಿಯೊಂದಿಗೆ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಗ್ರಾಮೀಣ ಭಾಗದ ಕೆಲವೆಡೆ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಅಲ್ಲದೆ ಕೆಲ ಮನೆಗಳ ಹೆಂಚುಗಳು ಹಾರಿ ಹಾಗಿವೆ.

ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಚಿಕ್ಕಬಂಡಾರ ಗ್ರಾಮದ ವಿಜಯಲಕ್ಷ್ಮೀ ಅವರ ಮನೆಯ ಮೇಲೆ ಭಾರೀ ಗಾತ್ರದ ಮರ ಬಿದ್ದು ಹಾನಿಯಾಗಿದೆ. ಯಡೂರು ಗ್ರಾಮದ ನೇತ್ರಾವತಿ, ತಣ್ಣೀರುಹಳ್ಳ ಗ್ರಾಮದ ರಾಜೇಶ್, ಮಸಗೋಡು ಗ್ರಾಮದ ಲೀಲಾ ಅವರ ಮನೆಗಳ ಮೇಲೆ ಸಹ ಮರ ಬಿದ್ದಿದೆ. ಕರ್ಕಳ್ಳಿ ಗ್ರಾಮದ ಮ್ಯಾಥ್ಯೂ ವರ್ಗೀಸ್ ಅವರ ಮನೆ ಬದಿಯ ಬರೆ ಕುಸಿದಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ

ಕಳೆದ 24 ಗಂಟೆಗಳ ಅವಧಿಯಲ್ಲಿ ಶಾಂತಳ್ಳಿ ಹೋಬಳಿಗೆ 76.4 ಮಿಲಿ ಮೀಟರ್ ಮಳೆಯಾಗಿದೆ. ಕೊಡ್ಲಿಪೇಟೆ 53.2, ಸೋಮವಾರಪೇಟೆ 25.4, ಸುಂಟಿಕೊಪ್ಪ 30.9, ಶನಿವಾರಸಂತೆ 19 ಹಾಗೂ ಕುಶಾಲನಗರಕ್ಕೆ 8.6 ಮಿ.ಮೀ ಮಳೆಯಾಗಿದೆ.

ವಿರಾಜಪೇಟೆ ತಾಲೂಕಿನಲ್ಲೂ ಮಳೆ ಆರ್ಭಟ ಮುಂದುವರಿದಿದ್ದು, ವಿರಾಜಪೇಟೆ ತಾಲೂಕಿನ ಕೆದಮುಳ್ಳೂರಿನಲ್ಲಿ ಮನೆಯೊಂದು ನೆಲಸಮವಾಗಿದೆ. ತೋರ ಗ್ರಾಮದ ಪಿ.ಟಿ.ಪಾರ್ವತಿ ಅವರ ಮನೆ ನೆಲಸಮವಾಗಿದೆ. ಕಳೆದ ಒಂದು ತಿಂಗಳಿನಿಂದ ಪಾರ್ವತಿ ಅವರು ಮಗಳ ಮನೆಯಲ್ಲಿ ವಾಸವಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ವಿರಾಜಪೇಟೆ ತಹಶಿಲ್ದಾರ್ ಯೋಗನಂದ್ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *