ಕೊಡಗಿನಲ್ಲಿ ಧಾರಾಕಾರ ಮಳೆ- ಈ ಬಾರಿಯೂ ಕಂಟಕವಾಗುತ್ತಾ ಆಗಸ್ಟ್ ತಿಂಗಳು?

Public TV
2 Min Read

ಮಡಿಕೇರಿ: ಕೊಡಗು ಜಿಲ್ಲೆಗೆ ಆಗಸ್ಟ್ ತಿಂಗಳು ಅಂದರೆ ಅದೇಕೊ ಅಪಾಯ ತಂದೊಂಡ್ಡುವ ತಿಂಗಳು ಎನ್ನುವಂತಾಗಿದೆ. ಕಳೆದ ಎರಡು ವರ್ಷಗಳಲ್ಲೂ ಇದೇ ಆಗಸ್ಟ್ ತಿಂಗಳು ಹಲವು ಸಾವು-ನೋವುಗಳಿಗೆ ಸಾಕ್ಷಿಯಾಗಿ ಹೋಗಿದೆ. ಈ ವರ್ಷವೂ ಮತ್ತದೇ ಸಂಕಷ್ಟಕ್ಕೆ ಈ ತಿಂಗಳು ಸಾಕ್ಷಿ ಆಗಿ ಬಿಡುತ್ತಾ ಅನ್ನೋ ಅನುಮಾನ ಮೂಡಿದೆ. ಕಳೆದ ಎರಡು ವರ್ಷವೂ ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿ ಹೋಗಿತ್ತು. ಹೇಗೋ ಮತ್ತೆ ಚೇತರಿಸಿಕೊಳ್ಳುತ್ತಿದ್ದ ಜಿಲ್ಲೆಯನ್ನು ಕೊರೊನಾ ಅನ್ನೋ ಡೆಡ್ಲಿ ವೈರಸ್ ಮತ್ತೆ ತಲೆ ಎತ್ತದಂತೆ ಮಾಡಿತ್ತು. ಅದರ ನಡುವೆ ಇದೀಗ ಆಶ್ಲೇಷ ನಕ್ಷತ್ರದ ಮಳೆ ಕೊಡಗಿಗೆ ಗಂಡಾಂತರ ತಂದೊಡ್ಡಿಬಿಡುತ್ತಾ ಎನ್ನೋ ಆತಂಕ ಹುಟ್ಟಿದೆ.

2018 ರಲ್ಲಿ ಇದೇ ರೀತಿ ಜುಲೈ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಂದಿರಲಿಲ್ಲ. ಆದರೆ ಆಗಸ್ಟ್ ತಿಂಗಳ ಮೂರನೇ ವಾರದಲ್ಲಿ ಸುರಿದಿದ್ದ ರಣಭೀಕರ ಮಳೆ ಬರೋಬ್ಬರಿ 7 ಪಂಚಾಯ್ತಿ ವ್ಯಾಪ್ತಿಯ 36 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಭೀಕರ ಭೂಕುಸಿತವಾಗುವಂತೆ ಮಳೆ ಸುರಿದಿತ್ತು. ಅಂದರೆ ಬರೋಬ್ಬರಿ ಒಂದೇ ವಾರದಲ್ಲಿ 800 ಮಿಲಿ ಮೀಟರ್ ಮಳೆ ಸುರಿದಿತ್ತು. ಪರಿಣಾಮವಾಗಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಲ್ಲಿ 22 ಜನರ ಪ್ರಾಣ ಪಕ್ಷಿಯೇ ಹಾರಿ ಹೋಗಿತ್ತು.

2019 ರ ಆಗಸ್ಟ್ ತಿಂಗಳಲ್ಲಿಯೂ ಇದೇ ಸ್ಥಿತಿ. ಜುಲೈ ತಿಂಗಳಿಂದನೇ ಎಡಬಿಡದೆ ಸುರಿದಿದ್ದ ಮಳೆ, ಆಗಸ್ಟ್ ಮೊದಲ ವಾರದಲ್ಲೇ ನಿರೀಕ್ಷೆಗೂ ಮೀರಿ ಮಳೆ ಅಬ್ಬರಿಸಿತ್ತು. ಬರೋಬ್ಬರಿ 1800 ಮಿಲಿ ಮೀಟರ್ ಮಳೆ ಹಗಲು ರಾತ್ರಿ ಎನ್ನದೆ ಸುರಿತ್ತು. ಪರಿಣಾಮ ಕೇವಲ ಮೂರೇ ದಿನದಲ್ಲಿ ಸೋಮವಾರಪೇಟೆ ಮತ್ತು ವಿರಾಜಪೇಟೆ ಎರಡು ತಾಲೂಕುಗಳು ಪ್ರವಾಹಕ್ಕೆ ಸಿಲುಕಿದ್ದವು.

ಮಡಿಕೇರಿ ತಾಲೂಕಿನ ಕೋರಂಗಾಲ ಮತ್ತು ವಿರಾಜಪೇಟೆ ತಾಲೂಕಿನ ತೋರಾದಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ 19 ಜನರು ಸಾವನ್ನಪ್ಪಿದ್ದರು. ಈ ಭಯ, ಆತಂಕ ಜಿಲ್ಲೆಯ ಜನರ ಮನಸ್ಸಿನಲ್ಲಿ ಹಾಗೇ ಉಳಿದಿದೆ. ಕಳೆದ ವರ್ಷದ ಮಳೆಯ ಪ್ರಮಾಣಕ್ಕೆ ಹೋಲಿಸಿಕೊಂಡರೆ ಈ ವರ್ಷವೇ ಜಾಸ್ತಿ ಮಳೆ ಸುರಿದಿದೆ. ಈ ಬಾರಿ ಜುಲೈ ತಿಂಗಳಲ್ಲಿ ಮಳೆ ಪ್ರಮಾಣ ಕಡಿಮೆ ಇತ್ತು. ಹೀಗಾಗಿ ಜಿಲ್ಲಾಡಳಿತ ಕೂಡ ಈ ಬಾರಿ ಅಷ್ಟೇನು ಮಳೆ ಬರೋದಿಲ್ಲ ಎನ್ನೋ ಸಮಾಧಾನದಲ್ಲಿತ್ತು. ಆದರೆ ಜನವರಿಯಿಂದ ಇಲ್ಲಿಯವರೆಗೆ ನೋಡಿದ್ರೆ ಕಳೆದ ವರ್ಷಕ್ಕಿಂತ ಈ ವರ್ಷ 31 ಮಿ ಮೀಟರ್ ಜಾಸ್ತಿ ಮಳೆಯಾಗಿದೆ. ಅಂದರೆ ಕಳೆದ ಬಾರಿ ಜನವರಿಯಿಂದ ಆಗಸ್ಟ್ ತಿಂಗಳ 3ರ ವರೆಗೆ 836 ಮಿ ಮೀ ಮಳೆಸುರಿದಿದ್ದರೆ, ಈ ಬಾರಿ 867 ಮಿ ಮೀ ಮಳೆಯಾಗಿದೆ. ಅದರಲ್ಲೂ ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ವರುಣ ಎಡಬಿಡದೆ ಅಬ್ಬರಿಸುತ್ತಿದ್ದಾನೆ.

ಹವಾಮಾನ ಇಲಾಖೆ ಕೂಡ ಜಿಲ್ಲೆಯಲ್ಲಿ ಇನ್ನು 4 ದಿನಗಳ ಕಾಲ 115 ಮಿ ಮೀಟರ್ ನಿಂದ 204 ಮಿ ಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಹೀಗಾಗಿ ಕೊಡಗು ಜಿಲ್ಲಾಡಳಿತ 4 ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಇದೇ ಅಂಶವೇ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ. ಕಳೆದ ಎರಡು ಬಾರಿಯೂ ಆಗಸ್ಟ್ ತಿಂಗಳಲ್ಲೇ ಭೂಕುಸಿತ ಮತ್ತು ಪ್ರವಾಹ ಸೃಷ್ಟಿಯಾಗಿತ್ತು. ಈ ವರ್ಷವೂ ಆಗಸ್ಟ್ ತಿಂಗಳಲ್ಲೇ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ ಮತ್ತೆ ಯಾವ ಅನಾಹುತ ಸಂಭವಿಸುವುದೋ ಎನ್ನು ಆತಂಕ ಜನರಲ್ಲಿ ಮನೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *