ಕೊಡಗಿನಲ್ಲಿ ಧಾರಾಕಾರ ಮಳೆ- ಇದೂವರೆಗೆ 52 ಪ್ರದೇಶಗಳಲ್ಲಿ ಪ್ರವಾಹ

Public TV
1 Min Read

– 14 ಪ್ರದೇಶದಲ್ಲಿ ಭೂಕುಸಿತ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದೂವರೆಗೆ ಜಿಲ್ಲೆಯ 52 ಪ್ರದೇಶಗಳಲ್ಲಿ ಪ್ರವಾಹ, 14 ಪ್ರದೇಶಗಳಲ್ಲಿ ಭೂಕುಸಿತವಾಗಿದೆ. 591 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. 9 ಪರಿಹಾರ ಕೇಂದ್ರಗಳಿಗೆ 591 ಜನರ ಸ್ಥಳಾಂತರ ಮಾಡಲಾಗಿದೆ. ಪ್ರವಾಹ ಭೂಕುಸಿತದಿಂದಾಗಿ 8 ಕಡೆ ರಸ್ತೆ ಸಂಚಾರ ಕಡಿತಗೊಂಡಿದೆ ಎಂದು ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.

ವಿರಾಜಪೇಟೆ ತಾಲೂಕಿನಲ್ಲಿರುವ ಅರಮೇರಿ ಕಳಂಚೇರಿ ಮಠ ಕಳೆದ ಬಾರಿಯೂ ಪ್ರವಾಹದಲ್ಲಿ ಮುಳುಗಿತ್ತು. ಸದ್ಯ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಹೆಚ್ಚಿದ್ದು, ಕೊಡಗಿನ ಅರಮೇರಿ ಕಳಂಚೇರಿ ಮಠವು ಜಲಾವೃತಗೊಂಡಿದೆ. ಲಿಂಗ ವೀರರಾಜೇಂದ್ರ ಪ್ರಸಾದ ಭವನ ಮುಳುಗಡೆಯಾಗಿದೆ. ಲಿಂಗ ವೀರರಾಜೇಂದ್ರ ಭವನದಲ್ಲಿದ್ದ ವಿವಿಧ ಎಲೆಕ್ಟ್ರಾನಿಕ್ಸ್ ವಸ್ತುಗಳು ನೀರಿನಲ್ಲಿ ಮುಳುಗಿ ನಷ್ಟ ಉಂಟಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡು ಮಠದ ಜನರು ಸಮಸ್ಯೆಯಲ್ಲಿದ್ದಾರೆ.

ಇತ್ತ ಹಾರಂಗಿ ಜಲಾಶಯಕ್ಕೆ 13592 ಕ್ಯೂಸೆಕ್ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಿಂದ 14233 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ. ಸದ್ಯ ಹಾರಂಗಿ ಜಲಾಶಯದಲ್ಲಿ 2854.05 ಅಡಿಗಳ ನೀರು ಸಂಗ್ರಹವಾಗಿದ್ದು, ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *