ಕೇಳಿದಾಗ ಹಣ ನೀಡದ ಪಾರ್ಶ್ವವಾಯು ಪೀಡಿತ ತಂದೆಯನ್ನೇ ಕೊಂದ ಮಗ..!

Public TV
1 Min Read

ಚಿಕ್ಕಮಗಳೂರು: ತಾನು ಕೇಳಿದಾಗ ಹಣ ನೀಡಿಲ್ಲವೆಂದು ಸಿಟ್ಟಿಗೆದ್ದ ಹಿರಿಯ ಮಗ ತಂದೆಯನ್ನೇ ಕೊಲೆಗೈದ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಮೂಡಿಗೆರೆ ತಾಲೂಕಿನ ಚನ್ನಡ್ಲುವಿನಲ್ಲಿ ನಡೆದಿದೆ. ಸುಂದರ ಪೂಜಾರಿ (52) ಮೃತ ದುರ್ದೈವಿ. ಸುಂದರ ಪೂಜಾರಿಯವರು ಪಾರ್ಶ್ವವಾಯು ಪೀಡಿತರಾಗಿದ್ದು, ಇವರನ್ನು ಹಿರಿಯ ಮಗ ನಿಖೇಶ್ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಸುಂದರ ಪೂಜಾರಿಯವರು ವಿಶೇಷ ಚೇತನ ಇಬ್ಬರು ಮಕ್ಕಳು, ಪತ್ನಿ ಜೊತೆ ವಾಸವಿದ್ದರು. ಹಿರಿಯ ಮಗ ನಿಖೇಸ್ ಎಲ್ಲರನ್ನು ಬಿಟ್ಟು ಬೆಂಗಳೂರು ಸೇರಿದ್ದ. ಇದೀಗ ಕೊರೊನಾ ವೈರಸ್ ಚೈನ್ ಲಿಂಕ್ ಕತ್ತರಿಸುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಹೇರಿರುವ ಹಿನ್ನೆಲೆಯಲ್ಲಿ ನಿಖೇಶ್, ಕಳೆದ 1 ತಿಂಗಳಿನಿಂದ ಮನೆಗೆ ಮರಳಿದ್ದನು.

ಹೀಗೆ ಮನೆಯಲಿದ್ದ ನಿಖೇಶ್, ಹಣ ನೀಡುವಂತೆ ತಂದೆ-ತಾಯಿಯನ್ನು ಪೀಡಿಸುತ್ತಿದ್ದ. ಈ ವೇಳೆ ತಂದೆ ಮಗನಿಗೆ ಹಣ ನೀಡಿರಲಿಲ್ಲ. ಇದೇ ಸಿಟ್ಟಿನಿಂದ ನಿಖೇಶ್ ತಂದೆಯ ಮೇಲೆ ಮಾರಣಾಂತಿಕ ಮಾಡಿದ್ದಾನೆ. ಕೂಡಲೇ ಸುಂದರ ಪೂಜಾರಿಯನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಪುತ್ರನನ್ನು ಬಾಳೂರು ಪೊಲೀಸರು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *