ಕೇರಳದ ಮಲಂಕರ ಮಾರ್ಥೋಮ ಸಿರಿಯನ್ ಚರ್ಚ್ ಮುಖ್ಯಸ್ಥರ ಜೊತೆ ಡಿಸಿಎಂ ಸೌಹಾರ್ದ ಮಾತುಕತೆ

Public TV
1 Min Read

ತಿರುವನಂತಪುರ: ಕೇರಳ ಬಿಜೆಪಿ ಸಹ ಉಸ್ತುವಾರಿ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಇಂದು ತಿರುವಲ್ಲಾದಲ್ಲಿರುವ ಮಲಂಕರ ಮಾರ್ಥೋಮ ಸಿರಿಯನ್ ಚರ್ಚ್‍ನ ಮುಖ್ಯಸ್ಥರಾದ ರೆವರೆಂಡ್ ಫಾದರ್ ಡಾ. ಥಿಯೋಡೋಶಿಯಸ್ ಮಾರ್ ಥೋಮಾ ಅವರನ್ನು ಭೇಟಿಯಾಗಿ ಸೌಹಾರ್ದ ಮಾತುಕತೆ ನಡೆಸಿದರು.

ಕ್ಯಾಥೋಲಿಕರ ಪವಿತ್ರ ಪ್ರಾರ್ಥನಾ ಸ್ಥಳವಾದ ಈ ಚರ್ಚ್ ಕೇರಳದ ಕ್ರೈಸ್ತರ ಪಾಲಿಗೆ ಬಹುಮುಖ್ಯ ಶ್ರದ್ಧಾ ಕೇಂದ್ರವಾಗಿದ್ದು, ಅಶ್ವತ್ಥನಾರಾಯಣ ಅವರು ಕೆಲ ಕಾಲ ಫಾದರ್ ಡಾ.ಥಿಯೋಡೋಶಿಯಸ್ ಅವರೊಂದಿಗೆ ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ, “ರಾಜಕೀಯ ಉದ್ದೇಶದಿಂದ ಈ ಚರ್ಚ್‍ಗೆ ಬಂದಿಲ್ಲ. ಪ್ರಸ್ತುತ ನಾನು ಕೇರಳ ಬಿಜೆಪಿ ಸಹ ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದೇನೆ. ಈ ಮೊದಲೇ ಚರ್ಚ್ ಬಗ್ಗೆ ಕೇಳಿದ್ದೆ. ಈಗ ಇಲ್ಲಿಗೆ ಭೇಟಿ ನೀಡುವ ಅವಕಾಶ ಸಿಕ್ಕಿದೆ ಎಂದರು.

ಇದು ವಿಶ್ವದ ಪ್ರಾಚೀನ ಚರ್ಚ್‍ಗಳಲ್ಲಿ ಒಂದಾಗಿದೆ. ಯೇಸುಕ್ರಿಸ್ತರ ಶಿಷ್ಯರಾಗಿದ್ದ ಸಂತ ಥಾಮಸ್ (ಸಿರಿಯಾಕ್‍ನಲ್ಲಿ ಮಾರ್ ಥೋಮಾ) ಕ್ರಿ.ಶ 52ರಲ್ಲಿ ಭಾರತಕ್ಕೆ ಬಂದು ಮಲಬಾರ್ ಕರಾವಳಿಯಲ್ಲಿ ಈ ಚರ್ಚ್‍ನ್ನು ಸ್ಥಾಪಿಸಿದರೆಂದು ಫಾದರ್ ತಿಳಿಸಿದರು. ಹೀಗಾಗಿ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಚಟುವಟಿಕೆಗಳನ್ನು ನೋಡಿ ಸಂತೋಷವಾಗಿದೆ ಎಂದು ಅಶ್ವತ್ಥನಾಯಣ ಅವರು ಹೇಳಿದರು.

ಇಲ್ಲಿನ ಶಿಸ್ತು, ಸೇವಾ ಮನೋಭಾವ ಕಂಡು ನನಗೆ ಅಚ್ಚರಿ ಉಂಟಾಯಿತು. ಪ್ರತಿಯೊಂದು ಕೆಲಸವನ್ನು ಅತ್ಯಂತ ಕರಾರುವಕ್ಕಾಗಿ, ಉದ್ದೇಶ ಸಾಕಾರಕ್ಕಾಗಿ ಎಲ್ಲರೂ ಪ್ರಯತ್ನ ಮಾಡುತ್ತಾರೆ. ಇದು ಅನುಕರಣೀಯ ಎಂದು ಅಭಿಪ್ರಾಯಪಟ್ಟರು.

Share This Article
Leave a Comment

Leave a Reply

Your email address will not be published. Required fields are marked *