ಕೇರಳದಲ್ಲಿ ಅಶ್ವತ್ಥ ನಾರಾಯಣ ಡೇ ಔಟ್- ಇ ಶ್ರೀಧರನ್ ಜತೆ ಮಾತುಕತೆ

Public TV
1 Min Read

ತಿರುವನಂತಪುರ: ಕೇರಳ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಕೇರಳದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.

ದಿನಪೂರ್ತಿ ವಿವಿಧ ಗಣ್ಯರು ಹಾಗೂ ಧರ್ಮ ಗುರುಗಳನ್ನು ಭೇಟಿಯಾದ ಡಿಸಿಎಂ ಅವರು, ಮುಖ್ಯವಾಗಿ ಬಿಜೆಪಿ ಮುಖಂಡರು ಹಾಗೂ ಮೆಟ್ರೋಮನ್ ಇ ಶ್ರೀಧರನ್ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಪ್ರಚಾರ, ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ ಅವರು, ಕೇರಳದ ಜನರು ಪ್ರಗತಿಯನ್ನು ಕೋರುತ್ತಿದ್ದಾರೆ. ಬಿಜೆಪಿ ಪಕ್ಷದ ಪರ ಅಲೆ ಬೀಸುತ್ತಿದೆ. ಎಲ್‍ಡಿಎಫ್ ಹಾಗೂ ಯುಡಿಎಫ್ ಆಡಳಿತ ಜನತೆಗೆ ಸಾಕಾಗಿದೆ ಕಾಂಗ್ರೆಸ್ ಹಾಗೂ ಎಡಪಕ್ಷಗಳಿಗೆ ಪರ್ಯಾಯವಾದ ರಾಜಕೀಯ ಶಕ್ತಿ ಉದಯಕ್ಕೆ ಇದು ಸಕಾಲ ಎಂದು ಡಿಸಿಎಂ ಹೇಳಿದರು.

ಶಾಂತಿಗಿರಿ ಆಶ್ರಮಕ್ಕೆ ಭೇಟಿ: ಮಧ್ಯಾಹ್ನ 1 ಗಂಟೆ ವೇಳೆಗೆ ಪೊಥೆನ್ ಕೋಡ್ ನಲ್ಲಿರುವ ಆಶ್ರಮಕ್ಕೆ ತೆರಳಿದ ಡಿಸಿಎಂ ಅವರು, ಸ್ವಾಮಿ ಗುರುರೀತನಮ್ ಜ್ಞಾನ ತಪಸ್ವಿ ಅವರ ಜತೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಡಿಸಿಎಂ ಅವರು ಆಶ್ರಮದಲ್ಲಿ ನಡೆಯುತ್ತಿರುವ ಸೇವಾ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಅಲ್ಲಿನ ಚಟುವಟಿಕೆಗಳ ಬಗ್ಗೆ ಆಶ್ರಮದ ಆಡಳಿತಾಧಿಕಾರಿ ಸ್ವಾಮಿ ಗುರುಮಿತ್ರನ್ ಜ್ನಾನ ತಪಸ್ವಿ ಅವರು ಮಾಹಿತಿ ನೀಡಿದರು. ಅಲ್ಲಿನ ಪ್ರಶಾಂತ ವಾತಾವರಣ ಹಾಗೂ ಸೇವಾ ಕಾರ್ಯಗಳನ್ನು ಕಂಡು ಡಿಸಿಎಂ ಅವರು ಅತೀವ ಸಂತಸ ವ್ಯಕ್ತಪಡಿಸಿದರು.

ನಾರಾಯಣ ಗುರುಗಳಿಗೆ ಗೌರವ: ತಿರುವನಂತಪುರ ಜಿಲ್ಲೆಯ ವರ್ಕಾಲದಲ್ಲಿರುವ ಶ್ರೀ ನಾರಾಯಣ ಗುರು ಅವರ ಸಮಾಧಿ ಇರುವ ಶಿವಗಿರಿ ಮಠಕ್ಕೆ ಅಶ್ವತ್ಥ ನಾರಾಯಣ ಭೇಟಿ ನೀಡಿದರು. ಈ ವೇಳೆ ಗುರುಗಳ ಸಮಾಧಿಗೆ ನಮನ ಸಲ್ಲಿಸಿದರು.

ನಂತರ ಡಿಸಿಎಂ ಅವರು, ತಿರುವನಂತಪುರದ ಕಾರ್ಡಿನಲ್ ಕ್ಲೀಮಿಸ್ ಎಮಿನೇನ್ಸ್ ಮಲಂಕರ ಚರ್ಚಿಗೆ ಭೇಟಿ ನೀಡಿ ಫಾದರ್ ಜತೆ ಮಾತುಕತೆ ನಡೆಸಿದರು. ಆ ಬಳಿಕ ಡಿಸಿಎಂ ಕೇರಳದ ವಿವಿಧ ನಾಯಕರಿಗೆ ಪ್ರಚಾರ, ಬಹಿರಂಗ ಸಭೆಗಳ ಆಯೋಜನೆಗಳ ಬಗ್ಗೆ ಸಲಹೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ರಾಜ್ಯದ ಬಿಜೆಪಿಯ ಕೆಲ ಮುಖಂಡರು ಅಶ್ವತ್ಥ ನಾರಾಯಣ ಜೊತೆಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *