ಕೇಂದ್ರದ ಪ್ರವಾಹ ಪರಿಹಾರ ಮೊತ್ತವನ್ನ ಮೊದಲ ಕಂತು ಅಂದ್ಕೋತ್ತೇವೆ: ಸಿಎಂ

Public TV
1 Min Read

ಬೆಂಗಳೂರು: ಪ್ರವಾಹದಿಂದ ತತ್ತರಿಸಿರುವ ಕರ್ನಾಟಕದ ಸಂತ್ರಸ್ತರ ನೆರವಿಗಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಡಿ ನೀಡಿರುವ 577.84 ಕೋಟಿ ರೂ. ಮೊದಲ ಕಂತು ಅಂತ ಅನ್ಕೋತೇವೆ. ಹೆಚ್ಚಿನ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಎನ್‍ಡಿಆರ್ ಎಫ್ ನಿಧಿಯಡಿ ನೀಡಿರುವ ಪ್ರವಾಹ ಪರಿಹಾರದ ಮೊತ್ತ ಕಡಿಮೆಯಾಯ್ತು ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ ಸಿಎಂ ಬಿಎಸ್‍ವೈ, ಕೇಂದ್ರದಿಂದ ನಿನ್ನೆ ಕೊಟ್ಟಿದ್ದು ಮೊದಲ ಕಂತು ಅಂತ ಅನ್ಕೋತೇವೆ. ಇನ್ನೂ ಹೆಚ್ಚಿನ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇವೆ. ಇನ್ನಷ್ಟು ಪರಿಹಾರ ಬರುವ ವಿಶ್ವಾಸ ಇದೆ ಎಂದರು. ಇತ್ತ ಮಾಜಿ ಪ್ರಧಾನಿ ನೆಹರು ಅವರ 131ನೇ ಜನ್ಮ ದಿನಾಚರಣೆ ಅಂಗವಾಗಿ, ವಿಧಾನಸೌಧದ ಪಶ್ಚಿಮ ಭಾಗದಲ್ಲಿರುವ ಪ್ರತಿಮೆ ಬಳಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.

ಇದೇ ವೇಳೆ ನಿನ್ನೆ ಸಂಜೆ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಭೇಟಿ ಮಾಡಿದ್ದ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಮಂಡ್ಯ ಡಿಸಿಸಿ ಬ್ಯಾಂಕ್ ಸಂಬಂಧ ಕುಮಾರಸ್ವಾಮಿ ಭೇಟಿ ಮಾಡಿ ಚರ್ಚಿಸಿದ್ದಾಗಿ ತಿಳಿಸಿದರು. ಅಲ್ಲದೇ ಯುಪಿಎಸ್‍ಸಿ ಮತ್ತು ಕೆಪಿಎಸ್‍ಸಿ ಪರೀಕ್ಷೆಗಳು ಒಟ್ಟಿಗೆ ಬಂದಿರುವ ಹಿನ್ನೆಲೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು. ಎರಡು ಪರೀಕ್ಷೆಗಳು ಒಟ್ಟಿಗೆ ಬಂದಿರುವ ಕಾರಣ ಕೆಪಿಎಸ್‍ಸಿ ಪರೀಕ್ಷೆಯ ಮುಂದೂಡಿಕೆಗೆ ವಿದ್ಯಾರ್ಥಿಗಳು ಮನವಿ ಮಾಡಿದ್ದರು.

ಉಳಿದಂತೆ ಪ್ರವಾಹದಿಂದ ತತ್ತರಿಸಿರುವ ಕರ್ನಾಟಕದ ಸಂತ್ರಸ್ತರ ನೆರವಿಗಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಡಿ 577.84 ಕೋಟಿ ರೂ.ಗಳನ್ನು ಮುಂಗಡ ಪರಿಹಾರವಾಗಿ ಮಂಜೂರು ಮಾಡಿತ್ತು. ರಾಜ್ಯದಲ್ಲಿ ಪ್ರವಾಹದಿಂದ ಸುಮಾರು 24,941 ಕೋಟಿ ರೂ. ನಷ್ಟವಾಗಿದ್ದು, ರಾಜ್ಯ ಸರ್ಕಾರ ಕೇಂದ್ರಕ್ಕೆ 10 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆ ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಮುಂಗಡವಾಗಿ ಎನ್‍ಡಿಆರ್ ನಿಧಿಯಿಂದ 577 ಕೋಟಿ ರೂ.ಗಳನ್ನು ನೀಡಿತ್ತು. ಇದರಿಂದ ಕೇಂದ್ರ ಸರ್ಕಾರ ರಾಜ್ಯ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿ ಕಡಿಮೆ ಹಣ ಬಿಡುಗಡೆ ಮಾಡಿದೆ ಎಂಬ ಆರೋಪ ಕೇಳಿ ಬಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *