ಕೇಂದ್ರದ ಪಡಿತರ ವಲಸೆ ಕಾರ್ಮಿಕರಿಗೆ ತಲುಪಿಸಲು ರಾಜ್ಯ ಸರ್ಕಾರಗಳು ಫೇಲ್!

Public TV
2 Min Read

ನವದೆಹಲಿ: ಲಾಕ್‍ಡೌನ್‍ನಿಂದ ಅತಿ ಹೆಚ್ಚು ಹೊಡೆತ ತಿಂದವರು ವಲಸೆ ಕಾರ್ಮಿಕರು. ಇವರ ಹಸಿವು ನೀಗಿಸಲೆಂದೇ ಕೇಂದ್ರ ಸರ್ಕಾರವೇನೋ ಉಚಿತ ಪಡಿತರ ಯೋಜನೆ ಜಾರಿಗೆ ತಂದಿತು. ಆದರೆ ಕೇಂದ್ರ ಕೊಟ್ಟಿದ್ದನ್ನ ಫಲಾನುಭವಿಗಳಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರಗಳು ಫೇಲ್ ಆಗಿವೆ. ಈ ಮಾತನ್ನ ನಾವು ಹೇಳ್ತಾ ಇಲ್ಲ, ಕೇಂದ್ರ ಸರ್ಕಾರವೇ ಈ ಬಗ್ಗೆ ವರದಿ ಬಿಡುಗಡೆ ಮಾಡಿದ್ದು ಅದರಲ್ಲಿ ರಾಜ್ಯಗಳ ಬೇಜವಾಬ್ದಾರಿ ಅನಾವರಣವಾಗಿದೆ.

ಹೌದು. ಲಾಕ್‍ಡೌನ್ ಅವಧಿಯಲ್ಲಿ ಕೊರೊನಾ ಬಿಕ್ಕಟ್ಟಿನ ಹೆಚ್ಚು ಹೊಡೆತ ತಿಂದವರು ವಲಸೆ ಕಾರ್ಮಿಕರು. ರಾತ್ರೋರಾತ್ರಿ ಘೋಷಣೆಯಾದ ಲಾಕ್‍ಡೌನ್‍ನಿಂದ ದಿಕ್ಕು ಕಾಣದಾದ ಕೋಟ್ಯಂತರ ವಲಸೆ ಕಾರ್ಮಿಕರ ಬದುಕು ಒಂದು ಕ್ಷಣದಲ್ಲಿ ಅತಂತ್ರವಾಗಿ ಬಿಡ್ತು. ಮಹಾನಗರಗಳಿಂದ ತಮ್ಮ ತಮ್ಮ ಊರು ತಲುಪಲು ನೂರಾರು ಕಿಲೋಮೀಟರ್ ನಡೆದುಕೊಂಡೆ ಹೋದರು. ಎಷ್ಟೋ ಮಂದಿ ನಡೆಯುತ್ತಲೇ ಪ್ರಾಣಬಿಟ್ಟರು. ಈ ಸಮಸ್ಯೆ ಬಗೆಹರಿಸಲೆಂದೇ ಕೇಂದ್ರ ಸರ್ಕಾರ ಉಚಿತ ಪಡಿತರ ಯೋಜನೆ ಜಾರಿ ಮಾಡಿತು. ಆದ್ರೆ ಅದನ್ನು ತಲುಪಿಸುವಲ್ಲಿ ರಾಜ್ಯ ಸರ್ಕಾರಗಳು ವಿಫಲವಾಗಿವೆ.

ಉಚಿತ ಪಡಿತರ ಸಿಕ್ಕಿದ್ದು ಬರೀ ಶೇ.13 ವಲಸಿಗರಿಗೆ ಮಾತ್ರ:
ವಲಸೆ ಕಾರ್ಮಿಕರು ಹಸಿನಿಂದ ಇರಬಾರದು ಎಂದು ಕೇಂದ್ರ ಸರ್ಕಾರ 8 ಲಕ್ಷ ಟನ್ ಉಚಿತ ಆಹಾರ ಧಾನ್ಯ ನೀಡುವ ಯೋಜನೆ ಜಾರಿ ಮಾಡಿತ್ತು. ಎಲ್ಲಾ ರಾಜ್ಯಗಳಿಗೂ ಆಹಾರ ಧಾನ್ಯ ಹಂಚಿಕೆ ಮಾಡಿ ವಲಸೆ ಕಾರ್ಮಿಕರಿಗಾಗಿ ಬಳಸಿಕೊಳ್ಳುವಂತೆ ಸೂಚನೆ ನೀಡಿತ್ತು. ಆದರೆ ರಾಜ್ಯ ಸರ್ಕಾರಗಳು ಮಾಡಿದ್ದೇ ಬೇರೆ. ಕೇಂದ್ರ ಕೊಟ್ಟ ಆಹಾರ ಧಾನ್ಯದಲ್ಲಿ ಕೇವಲ ಶೇ.13ರಷ್ಟು ಕಾರ್ಮಿಕರಿಗೆ ಕೊಟ್ಟ ಹಾಗೆ ಮಾಡಿ ಉಳಿದ ಆಹಾರವನ್ನು ಕೊಳೆಯುವಂತೆ ಮಾಡಿವೆ. ಈ ಅಂಕಿ ಅಂಶವನ್ನು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯವೇ ಹೊರಹಾಕಿದೆ.

ಕೇಂದ್ರದ ಅಂಕಿ ಅಂಶಗಳಲ್ಲಿ ಏನಿದೆ.?:
ವಲಸೆ ಕಾರ್ಮಿಕರಿಗಾಗಿ 8 ಲಕ್ಷ ಮೆಟ್ರಿಕ್ ಟನ್ ಉಚಿತ ಪಡಿತರವನ್ನು 8 ಕೋಟಿ ವಲಸೆ ಕಾರ್ಮಿಕರಿಗೆ ನೀಡುವ ಯೋಜನೆಯಾಗಿತ್ತು. ಆದ್ರೆ ಶೇ.13ರಷ್ಟು ಮಾತ್ರ ವಲಸೆ ಕಾರ್ಮಿಕರಿಗೆ ತಲುಪಿದೆ. ರಾಜ್ಯಗಳಿಗೆ ಕೇಂದ್ರ 6.38 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ವಿತರಿಸಿತ್ತು. ಆದರೆ ರಾಜ್ಯಗಳು ಕೇವಲ 1.07 ಮೆಟ್ರಿಕ್ ಟನ್ ಮಾತ್ರ ಕಾರ್ಮಿಕರಿಗೆ ವಿತರಿಸಿದೆ. 11 ರಾಜ್ಯಗಳು ಕೇವಲ ಶೇ.1 ನಷ್ಟೂ ಪಡಿತರ ವಿತರಣೆ ಮಾಡಿಲ್ಲ. ಗುಜರಾತ್, ಆಂಧ್ರ, ಗೋವಾ, ಮಹಾರಾಷ್ಟ್ರ, ಜಾರ್ಖಂಡ್, ಲಡಾಕ್, ಒರಿಸ್ಸಾ, ತಮಿಳುನಾಡು, ತೆಲಂಗಾಣ ರಾಜ್ಯಗಳು ಶೇ.1 ನಷ್ಟೂ ವಿತರಣೆ ಮಾಡಿಲ್ಲ. ಹರಿಯಾಣ, ಕರ್ನಾಟಕ, ಹಿಮಾಚಲ ಪ್ರದೇಶ, ಅಸ್ಸಾಂ ರಾಜ್ಯಗಳ ಕಾರ್ಯಕ್ಕೆ ಕೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದೆ.

ಒಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡಿರುವ ಪಡಿತರವನ್ನು ರಾಜ್ಯಗಳು ಸರಿಯಾಗಿ ವಲಸೆ ಕಾರ್ಮಿಕರಿಗೆ ವಿತರಿಸಿಲ್ಲ. ಇನ್ನು ಕೇಂದ್ರ ನವೆಂಬರ್‍ವರೆಗೂ ಉಚಿತ ಪಡಿತರ ಘೋಷಣೆ ಮಾಡಿದ್ದು, ಅದನ್ನಾದರೂ ಸರಿಯಾಗಿ ವಿತರಿಸಿ ಕಾರ್ಮಿಕರ ಹಸಿವು ನೀಗುವಂತೆ ಮಾಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *