ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಸಿಎಸ್ಕೆ ಆಟಗಾರರ ವಿರುದ್ಧ ಗಂಭೀರ ಟೀಕೆ ಮಾಡಿದ್ದಾರೆ.
2020ರ ಐಪಿಎಲ್ ಆವೃತ್ತಿಯಲ್ಲಿ ನಾಲ್ಕು ಸೋಲುಗಳನ್ನು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ 6ನೇ ಸ್ಥಾನವನ್ನು ಪಡೆದುಕೊಂಡಿದೆ. ಅದರಲ್ಲೂ ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಗೆಲುವ ಅವಕಾಶವನ್ನು ಕೈಚೆಲ್ಲಿದ್ದ ಸಿಎಸ್ಕೆ ಆಟಗಾರರ ವಿರುದ್ಧ ಭಾರೀ ಟೀಕೆ ಕೇಳಿಬಂದಿತ್ತು. ಇದರ ನಡುವೆಯೇ ಸೆಹ್ವಾಗ್ ಕೂಡ ತಂಡದ ಆಟಗಾರರ ಕುರಿತು ಟೀಕೆ ಮಾಡಿದ್ದಾರೆ. ಇದನ್ನೂ ಓದಿ: ಮುಂದಿನ ಪಂದ್ಯದಲ್ಲಿ ಗ್ಲುಕೋಸ್ ತೆಗೆದುಕೊಂಡು ಬನ್ನಿ- ಸಿಎಸ್ಕೆಗೆ ಸೆಹ್ವಾಗ್ ಸಲಹೆ
ಕೋಲ್ಕತ್ತಾ ತಂಡ ನೀಡಿದ್ದ ಗೆಲುವಿನ ಗುರಿಯನ್ನು ಚೆನ್ನೈ ಸುಲಭವಾಗಿ ಗಳಿಸಬಹುದಿತ್ತು. ಆದರೆ ಕೇದರ್ ಜಾದವ್, ರವೀಂದ್ರ ಜಡೇಜಾ ಆಡಿದ ಡಾಟ್ ಬಾಲ್ಸ್ ತಂಡಕ್ಕೆ ಯಾವುದೇ ಪ್ರಯೋಜನ ಆಗಲಿಲ್ಲ. ನನ್ನ ಪ್ರಕಾರ ಚೆನ್ನೈ ತಂಡದ ಕೆಲ ಬ್ಯಾಟ್ಸ್ ಮನ್ಸ್ ತಮಗೆ ಸಿಕ್ಕಿರುವ ಸ್ಥಾನವನ್ನು ಸರ್ಕಾರಿ ಉದ್ಯೋಗ ಎಂದು ಭಾವಿಸಿದ್ದಾರೆ. ಉತ್ತಮ ಪ್ರದರ್ಶನ ನೀಡಿದರೂ, ನೀಡದಿದ್ದರೂ ಅವರಿಗೆ ತಲುಪಬೇಕಾದ ವೇತನ ತಲುಪತ್ತದೆ ಎಂದು ಅವರಿಗೆ ತಿಳಿದಿದೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡುವಷ್ಟರಲ್ಲಿ ಭಾರತಕ್ಕೆ ಬುಲೆಟ್ ಟ್ರೈನ್ ಬರುತ್ತೆ: ಸೆಹ್ವಾಗ್
ಇತ್ತ ತಮ್ಮ ಫೇಸ್ಬುಕ್ ಸೀರಿಸ್ ವಿರು ಕೀ ಬೈಟಕ್ನಲ್ಲಿಯೂ ಜಾದವ್ ಬ್ಯಾಟಿಂಗ್ ಕುರಿತು ಟೀಕೆ ಮಾಡಿರುವ ಸೆಹ್ವಾಗ್, ಜಾದವ್ ಉಪಯೋಗಕ್ಕೆ ಬಾರದ ಅಲಂಕಾರಿಕ ವಸ್ತುವಂತೆ ಇದ್ದಾರೆ. 12 ಎಸೆತಗಳಲ್ಲಿ 7 ರನ್ ಗಳಿಸಿದ ಜಾದವ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಬೇಕಿತ್ತು ಎಂದು ಟೀಕೆ ಮಾಡಿದ್ದಾರೆ.
ಈಗಾಗಲೇ ಐಪಿಎಲ್ನಲ್ಲಿ 8 ಬಾರಿ ಪೈನಲ್ ಪ್ರವೇಶ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿಲ್ಲ. ಇದುವರೆಗೂ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಸೋಲುಂಡಿರುವ ಸಿಎಸ್ಕೆ, ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.