ಕೆಲಸವಿಲ್ಲವೆಂದು ಬೆಂಗ್ಳೂರಿಂದ ಊರಿಗೆ ಪ್ರಯಾಣ- ಅಸ್ವಸ್ಥಗೊಂಡು ಬಸ್ಸಿನಲ್ಲೇ ಕೊನೆಯುಸಿರೆಳೆದ ಟೆಕ್ಕಿ

Public TV
1 Min Read

– ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ

ಉಡುಪಿ: ಸಾಫ್ಟ್ ವೇರ್ ಉದ್ಯೋಗಿ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಪ್ರಾಣ ಬಿಟ್ಟಿರುವ ದುರ್ಘಟನೆ ನಡೆದಿದೆ.

ಇಂದು ಬೆಳಗ್ಗೆ ಕುಂದಾಪುರದಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಕೋಟೇಶ್ವರ ಕುಂಬ್ರಿ ನಿವಾಸಿ ಚೈತನ್ಯ(25) ಸಾವನ್ನಪ್ಪಿದ ಯುವಕ. ಬೆಂಗಳೂರಿನಿಂದ ಹುಟ್ಟೂರಿಗೆ ಖಾಸಗಿ ಬಸ್‍ನಲ್ಲಿ ಮರಳುವಾಗ ಪ್ರಯಾಣದ ವೇಳೆ ದುರ್ಘಟನೆ ಸಂಬವಿಸಿದೆ. ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾನೆ.

ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದ ಚೈತನ್ಯ, ಎರಡು ವರ್ಷಗಳಿಂದ ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ಸಾಫ್ಟ್ ವೇರ್ ಉದ್ಯೋಗ ಮಾಡುತ್ತಿದ್ದ. ಕೊರೊನಾ ಹಿನ್ನೆಲೆ ಕೆಲಸ ಕಡಿಮೆ ಇರುವ ಕಾರಣ ಮನೆಗೆ ಬರುವುದಾಗಿ ತಿಳಿಸಿದ್ದ. ಅದರಂತೆ ಸೋಮವಾರ ರಾತ್ರಿ ಖಾಸಗಿ ಬಸ್‍ನಲ್ಲಿ ಊರಿಗೆ ಹೊರಟಿದ್ದಾನೆ. ಅಲ್ಲದೆ ಬೆಳಗ್ಗೆ 6.30ರ ಸುಮಾರಿಗೆ ಕರೆಮಾಡಿ ಬಾರ್ಕೂರು ಸಮೀಪ ಬರುತ್ತಿರುವುದಾಗಿ ಮನೆಯವರಿಗೆ ತಿಳಿದ್ದಾನೆ.

ತನ್ನ ಊರು ಕೋಟೇಶ್ವರ ಬಂದರೂ ಯುವಕ ಇಳಿಯದ್ದನ್ನು ಕಂಡ ನಿರ್ವಾಹಕ, ಅನುಮಾನಗೊಂಡು ಹತ್ತಿರ ಬಂದು ನೋಡಿದ್ದಾನೆ. ಆಗ ಚೈತನ್ಯ ಅಸ್ವಸ್ಥಗೊಂಡಿದ್ದಾನೆ. ಮಲಗಿರಬಹುದು ಎಂದು ಎಬ್ಬಿಸಲು ನೋಡಿದ್ದಾನೆ. ಆದರೆ ಎದ್ದಿಲ್ಲ, ಅಷ್ಟೊತ್ತಿಗೆ ಮನೆಯವರ ಕರೆ ಬಂದಿದ್ದು, ಬಸ್ ನಿರ್ವಾಹಕ ಕರೆ ಸ್ವೀಕರಿಸಿ ವಿಷಯ ತಿಳಿಸಿದ್ದಾನೆ. ತಕ್ಷಣವೇ ಸಮೀಪದಲ್ಲಿದ್ದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಷ್ಟರಲ್ಲಾಗಲೇ ಚೈತನ್ಯ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಘಟನೆ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *