ಕೆರೆ ಏರಿ ಮೇಲೆ ಚಿರತೆ ಓಡಾಟ, ಮನೆಯಿಂದ ಹೊರ ಬಾರದ ಜನ

Public TV
1 Min Read

ಚಿಕ್ಕಮಗಳೂರು: ಗ್ರಾಮದ ಕೆರೆ ಏರಿ ಮೇಲೆ ಚಿರತೆ ಕಂಡು ಜನ ರಾತ್ರಿಯಷ್ಟೇ ಅಲ್ಲದೆ ಹಗಲಲ್ಲೂ ಕೂಡ ಕೆರೆ ಏರಿ ಸೇರಿದಂತೆ ಗ್ರಾಮದಲ್ಲಿ ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದಲ್ಲಿ ಚಿರತೆ ಕಂಡು ಜನ ಆತಂಕಕ್ಕೀಡಾಗಿದ್ದಾರೆ. ಸಂಜೆಯಾಗುತ್ತಲೇ ಎಲ್ಲರೂ ಮನೆ ಸೇರಿಕೊಳ್ಳುತ್ತಿದ್ದು, ರಾತ್ರಿ ವೇಳೆ ಯಾರೂ ಮನೆಯಿಂದ ಹೊರ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಹಲವು ದಿನಗಳಿಂದ ಗ್ರಾಮದಲ್ಲಿ ಚಿರತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಚಿರತೆ ಗ್ರಾಮದಲ್ಲಿ ಓಡಾಡುವ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಕೆರೆ ಏರಿ ಮೇಲೆ ಚಿರತೆ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಕ್ಕದ ಗ್ರಾಮಗಳನ್ನೂ ತಲುಪಿದೆ. ಚಿರತೆಯ ವಿಡಿಯೋ ಹಾಗೂ ಫೋಟೋವನ್ನು ನೋಡಿದ ಸುತ್ತಲಿನ ಗ್ರಾಮಗಳ ಜನತೆ ಆತಂಕಗೊಂಡಿದ್ದಾರೆ. ಚಿರತೆ ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಚಿರತೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಗ್ರಾಮದಲ್ಲಿ ಗಸ್ತು ತಿರುಗುತ್ತಿದ್ದು, ಹರಸಾಹಸ ಪಡುತ್ತಿದ್ದಾರೆ. ಕಳೆದೊಂದು ವಾರದ ಹಿಂದೆ ಗ್ರಾಮದ ಅಂಚಿಗೆ ಬಂದಿದ್ದ ಚಿರತೆಯನ್ನು ಕಂಡು ಸ್ಥಳೀಯರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ದೇವನೂರು ಗ್ರಾಮದ ಪಕ್ಕದ ಹಳ್ಳಿಯೊಂದರಲ್ಲಿ ಕಳೆದ ಕೆಲ ತಿಂಗಳ ಹಿಂದೆ ಚಿರತೆ ಕುರಿಯೊಂದನ್ನು ಹೊತ್ತೊಯ್ದಿತ್ತು. ಕುರಿಯ ರಕ್ತ ಕುಡಿದು ಮೃತದೇಹವನ್ನು ಹಾಗೇ ಬಿಟ್ಟು ಹೋಗಿತ್ತು. ಇದೀಗ ಮತ್ತೆ ಗ್ರಾಮದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ದೇವನೂರು ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.

Share This Article
Leave a Comment

Leave a Reply

Your email address will not be published. Required fields are marked *