ಹೊಸಗುಡ್ಡದಹಳ್ಳಿ ಅಗ್ನಿ ದುರಂತ ಪ್ರಕರಣ- ಪೊಲೀಸರಿಗೆ ಖಡಕ್ ಸೂಚನೆ ಕೊಟ್ಟ ಕಮಿಷನರ್

Public TV
1 Min Read

– ಅಗ್ನಿ ಅವಘಡ ತಡೆಯಲು ಪೊಲೀಸರಿಂದ ಕ್ರಮ

ಬೆಂಗಳೂರು: ಇತ್ತೀಚೆಗೆ ಹೊಸಗುಡ್ಡದಹಳ್ಳಿಯಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಇದರಿಂದಾಗಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಹೀಗಾಗಿ ಕೆಮಿಕಲ್ ಸ್ಟೋರೇಜ್‍ಗಳ ಮೇಲೆ ಹದ್ದಿನ ಕಣ್ಣಿಡಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸವರು ಸಿಬ್ಬಂದಿಗೆ ತಿಳಿಸಿದ್ದಾರೆ.

ಹೊಸಗುಡ್ಡದಹಳ್ಳಿ ಅಗ್ನಿ ದುರಂತದ ಬಳಿಕ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ನಗರದಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಯೋಜನೆ ರೂಪಿಸಿದ್ದಾರೆ. ನಗರದಲ್ಲಿನ ಬೀಟ್ ಪೊಲೀಸರಿಗೆ ಮತ್ತೊಂದು ಜವಾಬ್ದಾರಿ ವಹಿಸಿದ್ದು, ತಮ್ಮ ಬೀಟ್ ವ್ಯಾಪ್ತಿಯಲ್ಲಿನ ಕೆಮಿಕಲ್ ಸ್ಟೋರೇಜ್‍ಗಳನ್ನು ಪರಿಶೀಲಿಸುವಂತೆ ಸೂಚಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ಈ ಕುರಿತು ಮೆಮೋ ಹೊರಡಿಸಿದ್ದು, ಎಲ್ಲ ಪೊಲೀಸ್ ಠಾಣೆಗಳಿಗೆ ಮೆಮೋ ಕಳುಹಿಸಿದ್ದಾರೆ.

ತಮ್ಮ ಬೀಟ್ ವ್ಯಾಪ್ತಿಯ ಕೆಮಿಕಲ್ ಸ್ಟೋರೆಜ್‍ಗಳನ್ನು ಪರಿಶೀಲಿಸಲು ಸೂಚನೆ ನೀಡಿದ್ದಾರೆ. ಸ್ಟೋರೇಜ್‍ಗಳ ಸ್ಥಿತಿಗತಿ ಬಗ್ಗೆ ಇನ್ಸ್‍ಪೆಕ್ಟರ್ ಗಮನಕ್ಕೆ ತರಲು ಬೀಟ್ ಪಿಸಿಗಳಿಗೆ ಸೂಚಿಸಿದ್ದಾರೆ. ನಗರದ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಮ ಕೆಮಿಕಲ್ ಸ್ಟೋರೇಜ್‍ಗಳನ್ನು ಪಟ್ಟಿ ಮಾಡುವಂತೆ ತಿಳಿಸಿದ್ದಾರೆ. ಸಂಗ್ರಹವಾದ ಮಾಹಿತಿಯನ್ನು ಅಗ್ನಿಶಾಮಕ ಇಲಾಖೆಯೊಂದಿಗೆ ಹಂಚಿಕೊಳ್ಳುವಂತೆ ಹಾಗೂ ಮುಂದೆ ಈ ರೀತಿ ಅವಘಡ ಸಂಭವಿಸದಂತೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಜಂಟಿ ರೇಡ್ ನಡೆಸಲು ಯೋಜನೆ ರೂಪಿಸಿದ್ದಾರೆ. ಅಲ್ಲದೆ ವಸತಿ ಪ್ರದೇಶದಲ್ಲಿನ ಕೆಮಿಕಲ್ ಗೋದಾಮು ತಡೆಯಲು ಕ್ರಮ ಕೈಗೊಳ್ಳಲಾಗಿದೆ.

ಸಾರ್ವಜನಿಕರಿಗೂ ಕಮಿಷನರ್ ಮನವಿ ಮಾಡಿದ್ದು, ನಿಮ್ಮ ಸುತ್ತಮುತ್ತ ಅನುಮಾನಾಸ್ಪದ ಗೋದಾಮು ಇದ್ದಲ್ಲಿ ಬೀಟ್ ಪೊಲೀಸರಿಗೆ ತಿಳಿಸಿ. ಬೆಂಕಿ ಅವಘಡ ತಡೆಯಲು ಸಹಕರಿಸಿ ಎಂದು ಕಮಲ್ ಪಂಥ್ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *