ಕೆಪಿಟಿಸಿಎಲ್‌ ವಿಳಂಬ ಧೋರಣೆಗೆ ಸಿಡಿದ ಅಭ್ಯರ್ಥಿಗಳು

Public TV
1 Min Read

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್‌) ಸೇರಿದಂತೆ 6 ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವಂತೆ ಅಭ್ಯರ್ಥಿಗಳು ಒತ್ತಾಯ ಮಾಡಿದ್ದಾರೆ.

ಹುದ್ದೆ ಭರ್ತಿ ಮಾಡುವಂತೆ ಅಧಿಸೂಚನೆ ಹೊರಡಿಸಿದರೂ ಇನ್ನೂ ನೇಮಕಾತಿಯಾಗಿಲ್ಲ. ಹೀಗಾಗಿ ಕೂಡಲೇ ಹುದ್ದೆಯನ್ನು ಭರ್ತಿ ಮಾಡುವಂತೆ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

2019ರ ಫೆಬ್ರವರಿ 20 ರಂದು ನೇಮಕಾತಿ ಪ್ರಕ್ರಿಯೆಗೆ ಆದೇಶ ಹೊರಡಿಸಲಾಗಿತ್ತು. 2,646 ವಿವಿಧ ಹುದ್ದೆಗಳಿಗೆ 2 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಹುದ್ದೆ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿ 1 ವರ್ಷ 8 ತಿಂಗಳು ಕಳೆದರೂ ಪರೀಕ್ಷೆ ನಡೆಸಿಲ್ಲ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕನ್ನಡ ಪರೀಕ್ಷೆಯನ್ನ ಮಾತ್ರ ನಡೆಸಿದೆ. ಕೇವಲ ಕನ್ನಡ ಕಡ್ಡಾಯ ಪರೀಕ್ಷೆಯನ್ನ ಮಾತ್ರ ಮಾಡಿದ್ದು, ತಾಂತ್ರಿಕ ಪರೀಕ್ಷೆಯನ್ನ ಇನ್ನೂ ನಡೆಸಿಲ್ಲ. ಹೀಗಾಗಿ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ಬ್ರೇಕ್‌ ಬಿದ್ದಿದೆ.

ನೇಮಕಾತಿ ಯಾಕಿಲ್ಲ?
ಕೋವಿಡ್‌ 19 ನಿಂದಾಗಿ ಸರ್ಕಾರ ನೇಮಕಾತಿಗೆ ಕೊಕ್ಕೆ ಹಾಕಿದೆ. ಸದ್ಯ ರಾಜ್ಯದ ನೌಕರರಿಗೆ ಸಂಬಳ ನೀಡಲು ಸರ್ಕಾರ ಪರದಾಡುತ್ತಿದೆ. ಈಗ ಹೊಸದಾಗಿ ನೇಮಕ ಮಾಡಲು ಮುಂದಾದರೆ ಅವರ ಸಂಬಳಕ್ಕೆ ತಿಂಗಳಿಗೆ ಅಂದಾಜು 13 ಕೋಟಿ ರೂ. ಬೇಕಾಗಬಹುದು. ಇಷ್ಟೊಂದು ಮೊತ್ತವನ್ನು ಭರಿಸಲು ಸರ್ಕಾರದ ಆರ್ಥಿಕ ಇಲಾಖೆ ಒಪ್ಪಿಗೆ ನೀಡದ ಕಾರಣ ಯಾವುದೇ ನೇಮಕಾತಿ ಮಾಡದೇ ಇರಲು ಸರ್ಕಾರ ಮುಂದಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *