ಕೆನಡಾ ಟ್ರಿಪ್ ಬಿಟ್ಟು ರೈತರಿಗೆ ಉಚಿತ ಸೇವೆ ನೀಡುತ್ತಿರುವ ಸಲೂನ್ ಮಾಲೀಕ

Public TV
3 Min Read

– ಪತ್ನಿಯೊಂದಿಗಿನ ಕೆನಡಾ ಟ್ರಿಪ್ ಕ್ಯಾನ್ಸಲ್
– ಪ್ರತಿಭಟನಾ ನಿರತ ರೈತರಿಗೆ ಉಚಿತ ಸೇವೆ

ನವದೆಹಲಿ: ಕೃಷಿ ಕಾನೂನುಗಳನ್ನು ವಿರೋಧಿಸಿ ಕೆಲ ವಾರಗಳಿಂದ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಪಟ್ಟು ಬಿಡದೆ ಹೋರಾಟ ನಡೆಸುತ್ತಿದ್ದಾರೆ. ನಗರದ ಸಿಂಘು ಬಾರ್ಡರ್‍ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಹಲವರು ಹಲವು ರೀತಿಯ ಸಹಾಯ ಮಾಡಿದ್ದಾರೆ. ಅದೇ ರೀತಿ ಸಲೂನ್ ಮಾಲೀಕರೊಬ್ಬರು ತಮ್ಮ ಕೆನಡಾ ಪ್ರವಾಸ ರದ್ದುಗೊಳಿಸಿ ಉಚಿತ ಸೇವೆ ನೀಡಲು ಮುಂದಾಗಿದ್ದಾರೆ.

ಸುಮಾರು 20 ದಿನಗಳಿಂದ ರೈತರು ಸಿಂಘು ಬಾರ್ಡರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ ಕಟಿಂಗ್, ಶೇವಿಂಗ್‍ಗಾಗಿ ಸಾಲಾಗಿ ನಿಲ್ಲುತ್ತಿದ್ದ ರೈತರಿಗೆ ಸಹಾಯ ಮಾಡಲು ಕ್ರೇಜಿ ಬ್ಯೂಟಿ ಸಲೂನ್‍ನ ಮಾಲೀಕ ಲಭ್ ಸಿಂಗ್ ಠಾಕೂರ್ ಅವರು ತಮ್ಮ ಕೆನಡಾ ಪ್ರವಾಸವನ್ನು ರದ್ದುಪಡಿಸಿದ್ದಾರೆ. ಅಲ್ಲದೆ ಉಚಿತವಾಗಿ ರೈತರ ಸೇವೆ ಸಲ್ಲಿಸುತ್ತಿದ್ದಾರೆ.

ಕುರುಕ್ಷೇತ್ರದ ಪೇಹವಾದಲ್ಲಿ ಇವರ ಅಂಗಡಿ ಇದ್ದು, ಇದೀಗ ಅವರು ಸಿಂಘು ಬಾರ್ಡರ್‍ಗೆ ಸ್ಥಳಾಂತರಗೊಂಡು ರೈತರಿಗೆ ಉಚಿತ ಕಟಿಂಗ್ ಶೇವಿಂಗ್ ಮಾಡುತ್ತಿದ್ದಾರೆ. ಹೈ ವೇಯಲ್ಲಿಯೇ ಕಟಿಂಗ್ ಶಾಪ್ ಇಟ್ಟುಕೊಂಡಿದ್ದು, ಟ್ರ್ಯಾಕ್ಟರ್ ಟ್ರೇಲಿಗೆ ಕನ್ನಡಿ ನೇತು ಹಾಕಿ , ಮೂರು ಚೇರ್‍ಗಳನ್ನು ಹಾಕಿ ಕಟಿಂಗ್ ಮಾಡುತ್ತಿದ್ದಾರೆ. ರೈತರಿಗೆ ಸಂಪೂರ್ಣ ಉಚಿತ ಸೇವೆ ಒದಗಿಸುತ್ತಿದ್ದಾರೆ.

ನನ್ನ ಪತ್ನಿಯೊಂದಿಗೆ ಕುರುಕ್ಷೇತ್ರದಲ್ಲಿ ಪಾರ್ಲರ್ ನಡೆಸುತ್ತಿದ್ದೇನೆ. ನಮ್ಮ ಬಹುತೇಕ ಗ್ರಾಹಕರು ರೈತರೇ ಆಗಿದ್ದಾರೆ. ಇದೀಗ ಪ್ರತಿಭಟನೆ ನಡೆಸುತ್ತಿರುವುದರಿಂದ ಅಂಗಡಿಯನ್ನು ಸಿಂಘು ಬಾರ್ಡರ್ ಗೆ ಸ್ಥಳಾಂತರಿಸುವಂತೆ ಕೇಳಿಕೊಂಡರು. ಹೀಗಾಗಿ ನಮ್ಮ ತಂಡದೊಂದಿಗೆ ನಾನು ಇಲ್ಲಿಗೆ ಬಂದೆ. ನಾವು ಪ್ರತಿ ದಿನ 100-150 ಜನರಿಗೆ ಕಟಿಂಗ್ ಮಾಡುತ್ತೇವೆ. ಯಾವುದೇ ರೀತಿಯ ಶುಲ್ಕ ಪಡೆಯುವುದಿಲ್ಲ. ಯಾರಾದರೂ ಹಣ ನಿಡಲು ಬಂದರೆ ನಾವು ತಿರಸ್ಕರಿಸುತ್ತೇವೆ ಎಂದು ಅಂಗಡಿ ಮಾಲೀಕ ಲಭ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.

ರೈತರಿಗೆ ಸಹಾಯ ಮಾಡುತ್ತಿರುವುದಕ್ಕೆ ನನಗೆ ಸಂತೋಷವಿದೆ ಎಂದು ಠಾಕೂರ್ ಹೇಳಿದ್ದಾರೆ. ಆದರೆ ಅವರು ಇಂದು ಸ್ವಲ್ಪ ಬೇಸರದಲ್ಲಿದ್ದು, ಅವರ ಈ ಹಿಂದಿನ ವರ್ಷಗಳಂತೆ ಪತ್ನಿಯ ಹುಟ್ಟುಹಬ್ಬವನ್ನು ಆಚರಿಸಲು ಅವರಿಗೆ ಆಗುತ್ತಿಲ್ಲ.

ನಮ್ಮ ಸಲೂನ್‍ಗೆ ಪತ್ನಿ ಸಾಕಷ್ಟು ಕೊಡುಗೆ ನೀಡಿದ್ದಾಳೆ. ಕುರುಕ್ಷೇತ್ರದಲ್ಲಿನ ನಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ಚಹಾ ಮಾಡಿಕೊಡುತ್ತಾಳೆ. ಅಲ್ಲದೆ ನಮ್ಮ ಬಗ್ಗೆ ಸಹ ಕಾಳಜಿ ವಹಿಸುತ್ತಾಳೆ. ಅವಳ ಹುಟ್ಟುಹಬ್ಬವಾದ ಇಂದು ಅವಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವಳು ಕಾಳಜಿ ವಹಿಸುತ್ತಾಳೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.

ಪ್ರತಿ ವರ್ಷ ಪತ್ನಿಯ ಹುಟ್ಟುಹಬ್ಬಕ್ಕೆ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದೆವು. ಈ ವರ್ಷವೂ ಕೆನಡಾಗೆ ತೆರಳಲು ಯೋಜನೆ ರೂಪಿಸಿದ್ದೆವು. ಆದರೆ ರೈತರ ಪ್ರತಿಭಟನೆಯಿಂದಾಗಿ ನಾವು ಇದನ್ನು ರದ್ದುಪಡಿಸಿದೆವು. ಇದೀಗ ರೈತರ ಸೇವೆ ಮಾಡಲು ಸಿಂಘು ಬಾರ್ಡರ್ ಗೆ ಬಂದಿದ್ದೇನೆ. ಪ್ರತಿ ದಿನ 15 ಗಂಟೆಗಳ ಕಾಲ ಕೆಲಸ ಮಾಡುತ್ತೇವೆ. ರೈತರಿಂದ ಹಣ ಪಡೆಯುವುದಿಲ್ಲ ಎಂದು ಲಭ್ ಸಿಂಗ್ ಠಾಕೂರ್ ವಿವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *