ಕೃಷಿ ಸುಧಾರಣೆಯಿಂದ ಹೊಸ ಮಾರುಕಟ್ಟೆ, ಅವಕಾಶ ಸೃಷ್ಟಿ – ಮೋದಿ ಸಮರ್ಥನೆ

Public TV
1 Min Read

ನವದೆಹಲಿ: ಕೃಷಿ ಸುಧಾರಣೆಯಿಂದ ರೈತರಿಗೆ ಹೊಸ ಮಾರುಕಟ್ಟೆ ಮತ್ತು ಅವಕಾಶಗಳನ್ನು ತೆರೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಒಕ್ಕೂಟದ (ಫಿಕ್ಕಿ) 93ನೇ ವಾರ್ಷಿಕ ಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ಹೊಸ ಸುಧಾರಣೆಯಿಂದ ರೈತರು ತಂತ್ರಜ್ಞಾನದ ಲಾಭ ಪಡೆಯಬಹುದು. ಇದರಿಂದಾಗಿ ಕೃಷಿಯಲ್ಲಿ ಹೆಚ್ಚಿನ ಹೂಡಿಕೆಯಾಗುತ್ತದೆ. ವಿಶೇಷವಾಗಿ ಸಣ್ಣ ರೈತರು ಇದರಿಂದ ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ ಎಂದರು.

ಭಾರತದ ರೈತರು ಈಗ ತಮ್ಮ ಉತ್ಪನ್ನವನ್ನು ನೇರವಾಗಿ ಸ್ಥಳೀಯ ಮಾರುಕಟ್ಟೆ ಮತ್ತು ಹೊರಗಡೆ ಮಾರಾಟ ಮಾಡಲು ಅವಕಾಶ ಸಿಕ್ಕಿದೆ ಎಂದರು.

ಇಂದು ರೈತರು ಮಂಡಿಯಲ್ಲಿ ಉತ್ಪನ್ನವನ್ನು ಮಾರಾಟಬಹುದು. ಅಷ್ಟೇ ಅಲ್ಲದೇ ಡಿಜಿಟಲ್‌ ವೇದಿಕೆಯ ಮೂಲಕ ಮಾರಾಟ ಮಾಡಬಹುದು. ರೈತರ ಆದಾಯವನ್ನು ಹೆಚ್ಚಿಸಲು ನಾವು ಈ ಕ್ರಮವನ್ನು ಕೈಗೊಂಡಿದ್ದೇವೆ ಎಂದು ಮತ್ತೊಮ್ಮೆ ಕಾಯ್ದೆಯನ್ನು ಸಮರ್ಥಿಸಿಕೊಂಡರು.

ಈಗ ಕೃಷಿ ಕ್ಷೇತ್ರ ಮತ್ತು ಅದಕ್ಕೆ ಸಂಬಂಧಿಸಿದ ಪೂರಕ ಕ್ಷೇತ್ರಗಳ ನಡುವೆ ಗೋಡೆಗಳನ್ನು ನಾವು ನೋಡಿದ್ದೇವೆ. ಅದು ಕೃಷಿ ಮೂಲಸೌಕರ್ಯ, ಆಹಾರ ಸಂಸ್ಕರಣೆ, ಸಂಗ್ರಹಣೆ ಅಥವಾ ಕೋಲ್ಡ್‌ ಚೈನ್‌ ಇರಬಹುದು. ಈ ಎಲ್ಲಾ ಗೋಡೆಗಳು ಮತ್ತು ಅಡೆತಡೆಗಳನ್ನು ಈಗ ತೆಗೆದುಹಾಕಲಾಗಿದೆ. ಸುಧಾರಣೆಗಳ ನಂತರ ರೈತರು ಹೊಸ ಮಾರುಕಟ್ಟೆಗಳು, ಆಯ್ಕೆಗಳು ಮತ್ತು ತಂತ್ರಜ್ಞಾನದ ಬಳಕೆಯಿಂದ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಕೋಲ್ಡ್ ಸ್ಟೋರೇಜ್ ಮೂಲಸೌಕರ್ಯವನ್ನು ಆಧುನೀಕರಿಸಲಾಗುವುದು. ಇದರಿಂದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಆಗಲಿದ್ದು ರೈತರಿಗೆ ಹೆಚ್ಚಿನ ಲಾಭವಾಗಲಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *