ಕುರಿಗಳ ಸಂತೆ ಸಾವಿರಾರು ಜನ ಭಾಗಿ – ಕಾಟಾಚಾರಕ್ಕೆ ಅಧಿಕಾರಿಗಳ ಭೇಟಿ

Public TV
1 Min Read

– ಮಾಸ್ಕ್, ಸಾಮಾಜಿಕ ಅಂತರ ಇಲ್ಲ

ಯಾದಗಿರಿ: ಜಿಲ್ಲೆಯಲ್ಲಿ ನಿತ್ಯವೂ ಕೋವಿಡ್ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದ್ದು, ಸರಕಾರ ಈಗಾಗಲೇ ಕೋವಿಡ್ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಆದರೆ ಯಾದಗಿರಿಯಲ್ಲಿ ಮಾತ್ರ ಜನರು ಡೋಂಟ್ ಕೇರ್ ಎನ್ನುತ್ತಿದ್ದಾರೆ.

ಯಾದಗಿರಿ ನಗರದ ಹೊರಭಾಗದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ಮಂಗಳವಾರ ಕುರಿಗಳ ಸಂತೆ ಹಾಗೂ ಜಾನುವಾರು ಸಂತೆ ನಡೆಸಲಾಗುತ್ತಿದೆ. ಆದರೆ ಯಾವುದೇ ಕೋವಿಡ್ ನಿಯಮ ಪಾಲನೆ ಜನ ಮಾಡುತ್ತಿಲ್ಲ.

ಕುರಿ ಹಾಗೂ ಜಾನುವಾರು ಮಾರಾಟ ಹಾಗೂ ಖರೀದಿ ಮಾಡಲು ತೆಲಂಗಾಣ, ಕಲಬುರಗಿ, ವಿಜಯಪುರ ಮೊದಲಾದ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಕುರಿಗಳ ಸಮೇತ ಜನ ಮಾರುಕಟ್ಟೆಗೆ ಬರುತ್ತಿದ್ದಾರೆ. ಆದರೆ ಕೋವಿಡ್ ನಿಯಮ ಮಾತ್ರ ಪಾಲನೆ ಮಾಡದೇ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ.

ಸಾವಿರಾರು ಸಂಖ್ಯೆಯಲ್ಲಿ ಗುಂಪು ಗುಂಪಾಗಿ ಸೇರಿ ಸಂತೆಯಲ್ಲಿ ಭಾಗವಹಿಸುತ್ತಿದ್ದಾರೆ. ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡದೇ ನಿಯಮ ಉಲ್ಲಂಘನೆ ಮಾಡಲಾಗಿದೆ. ಹೆಚ್ಚಿನ ಜನಸಂದಣಿ ಸೇರುವುದಕ್ಕೆ ನಿಷೇಧವಿದ್ದರೂ ಜನರು ಮಾತ್ರ ಜಿಲ್ಲಾಡಳಿತದ ಆದೇಶ ಪಾಲನೆ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ.

ನಗರಸಭೆ ಅಧಿಕಾರಿ ಬಿ.ಟಿ.ನಾಯಕ ಹಾಗೂ ಪೊಲೀಸರು ಕೂಡ ಕೇವಲ ರಸ್ತೆ ಬದಿ ನಿಂತು ಕ್ಯಾಮೆರಾಗಳ ಮುಂದೆ ಪೋಸ್ ಕೊಟ್ಟು ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡದೇ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಹಾಕುವ ಕೆಲಸ ಮಾಡುತ್ತಿದ್ದಾರೆ. ಆದರೆ ಸಾವಿರಾರು ಸಂಖ್ಯೆಯಲ್ಲಿ ಸೇರಿ ಕುರಿಗಳ ಸಂತೆ ನಡೆಯುತ್ತಿದ್ದರೂ ಮೌನ ವಹಿಸಿದಕ್ಕೆ ಹಲವಾರು ಅನುಮಾನಕ್ಕೆ ಕಾರಣವಾಗಿದೆ.

ಸಂತೆಯಲ್ಲಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಹಾಕುವ ಕೆಲಸ ಕೂಡ ಮಾಡಿಲ್ಲ. ಕೇವಲ ಕಾಟಾಚಾರಕ್ಕೆ ಎಂಬಂತೆ ಕುರಿಗಳ ಸಂತೆ ನಡೆಯುವ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಬಿ.ಟಿ.ನಾಯಕ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *