ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮುಗಿಯದ ಪೂಜೆ ವಿವಾದ- ಪೂಜೆಯಲ್ಲೇ ನ್ಯೂನ್ಯತೆ ಇದೆ ಎಂದು ಆರೋಪ

Public TV
1 Min Read

ಮಂಗಳೂರು: ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಶೈವ-ವೈಷ್ಣವ ಪೂಜಾ ವಿವಾದ ಸದ್ಯ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ದೇವಸ್ಥಾನದಲ್ಲಿ ನಡೆಯುತ್ತಿರುವ ಪೂಜಾ ಪದ್ದತಿಗಳಲ್ಲೇ ನ್ಯೂನ್ಯತೆಗಳಿದೆ,ಈ ನಡುವೆ ಅರ್ಚಕರು ದೇವತಾ ತಾರತಮ್ಯ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ದೇವಸ್ಥಾನದ ಹಿತರಕ್ಷಣಾ ವೇದಿಕೆ ಮಾಡಿದೆ.

ದಕ್ಷಿಣ ಭಾರತದ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಪೂಜಾ ವಿವಾದ ಮತ್ತೆ ಮುನ್ನಲೆಗೆ ಬಂದಿದ್ದು, ದೇವಸ್ಥಾನದಲ್ಲಿ ಶಿವರಾತ್ರಿಯ ಆಚರಣೆ ಮಾಡುವ ವಿಚಾರದಲ್ಲಿ ನಡೆದಿದ್ದ ಜಟಾಪಟಿ ಇದೀಗ ದೇವಸ್ಥಾನದಲ್ಲಿ ನಡೆಯುವ ದೈನಂದಿನ ಪೂಜೆಯಲ್ಲೇ ನ್ಯೂನತೆಗಳಿದೆ ಎಂದು ಹೇಳುವಷ್ಟರ ಮಟ್ಟಿಗೆ ಬಂದು ತಲುಪಿದೆ. ಕುಕ್ಕೆ ಸುಬ್ರಹ್ಮಣ್ಯ ಶೈವಾಂಶ ದೇವಸ್ಥಾನವಾಗಿದ್ದರು ಸಹ ಇಲ್ಲಿ ಅರ್ಚಕರು ಅಂತರ್ಯಾಮಿ ಪೂಜೆ ಮೂಲಕ ವಿಷ್ಣುವನ್ನು ಆರಾಧನೆ ಮಾಡುತ್ತಿದ್ದಾರೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಆರೋಪಿಸಿದ್ದು, ಮೂಲ ದೇವರಿಗೆ ಪೂಜೆ ಮಾಡದೆ ವಿಷ್ಣುವಿಗೆ ಪೂಜೆ ಮಾಡುತ್ತಾರೆ. ಅಷ್ಟಮಂಗಲದಲ್ಲಿಯೂ ಪೂಜೆಯಲ್ಲಿ ಆಗುತ್ತಿರುವ ಈ ನ್ಯೂನತೆಗಳು ಉಲ್ಲೇಖವಾಗಿದೆ ಎಂದು ದೇವಸ್ಥಾನದ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಹೇಶ್ ಆರೋಪಿಸಿದ್ದಾರೆ.

ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಟ್ಟ ಸಾರ್ವಜನಿಕ ದೇವಸ್ಥಾನಗಳಲ್ಲಿ ಆಯಾಯ ದೇವರುಗಳಿಗೆ ಆಯಾಯ ರೀತಿಯಲ್ಲಿ ಪೂಜೆ ಸಲ್ಲಿಸಬೇಕು. ಅದೇ ರೀತಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ 1980ರಲ್ಲಿ ಆಗಿರುವನಿರ್ಧಾರದ ಪ್ರಕಾರವೇ ಪೂಜೆ ನಡೆಯಬೇಕು ಎಂಬುದು ದೇವಸ್ಥಾನ ಹಿತರಕ್ಷಣಾ ವೇದಿಕೆಯ ಒತ್ತಾಯವಾಗಿದೆ. ಆದರೆ ಇಲ್ಲಿ ಅರ್ಚಕರು ದೇವತಾ ತಾರತಮ್ಯ ಮಾಡುತ್ತಿದ್ದಾರೆ, ಶಿವಲಿಂಗಕ್ಕೆ ವಿಷ್ಣು ಅಂತರ್ಯಾಮಿ ಎಂದು ಪೂಜೆ ಮಾಡುತ್ತಾರೆ, ಈ ನಡುವೆ ಸುಬ್ರಹ್ಮಣ್ಯ ದೇವರ ಒಳಗಿರುವ ವಿಷ್ಣುವಿಗೆ ಪೂಜೆ ಮಾಡುತ್ತಾರೆ, ನೈವೇದ್ಯ ವಿಷ್ಣುವಿಗೆ ನೀಡುತ್ತಾರೆ, ಶಿವ ದೇವರ ನೈವೇದ್ಯ ಪ್ರಸಾದವನ್ನು ಸಹಿತ ಅರ್ಚಕರು ಸ್ವೀಕರಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಈ ವಿವಾದಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆಗಳಿಂದ ಭಕ್ತರು ಗೊಂದಲ ಮತ್ತು ನೋವಿಗೆ ಒಳಗಾಗಿದ್ದಾರೆ. ಹೀಗಾಗಿ ಮುಜರಾಯಿ ಇಲಾಖೆ ಈ ಬಗ್ಗೆ ಶೀಘ್ರದಲ್ಲಿಯೇ ಅಧಿಕಾರಿಗಳು, ಭಕ್ತರು, ಅರ್ಚಕರು, ಧಾರ್ಮಿಕ ಪರಿಷತ್‍ನ ಜೊತೆ ಸಭೆ ನಡೆಸಿ ಈ ಎಲ್ಲಾ ಗೊಂದಲವನ್ನು ನಿವಾರಿಸಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *