ಕಾಳಜಿಗೆ ಮನಸೋತು ಮಗುವಿಗೆ ಜಿಲ್ಲಾಧಿಕಾರಿ ಹೆಸರಿಟ್ಟ ದಂಪತಿ

Public TV
1 Min Read

ಬಳ್ಳಾರಿ: ತಮ್ಮ ಮಗುವಿಗೆ ಮಹಾತ್ಮರ, ಮುತ್ತಾತರ ಹೆಸರು ಇಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ದಂಪತಿ ತಮ್ಮ ಮಗುವಿಗೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೆಸರಿಟ್ಟಿದ್ದಾರೆ.

ದಾವಣಗೆರೆಯಲ್ಲಿ ನೆಲೆಸಿರುವ ದೀಪಕ್ ದಂಪತಿ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೆಸರಿಟ್ಟಿದ್ದಾರೆ. ದೀಪಕ್ ಅವರ ಪತ್ನಿಯ ತವರು ಮನೆ ಬಳ್ಳಾರಿ. ಹೀಗಾಗಿ ಕಳೆದ ಎರಡು ತಿಂಗಳ ಹಿಂದೆ ಹೆರಿಗೆಗೆಂದು ಬಳ್ಳಾರಿಗೆ ತೆರಳಿದ್ದರು. ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ನಂತರ ಹೆರಿಗೆಯನ್ನೂ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಯಶಸ್ವಿಯಾಗಿ ಮಾಡಿಸಲಾಗಿತ್ತು.

ಗಂಡು ಮಗು ಜನನವಾಗಿತ್ತು. ಅದೃಷ್ಟವಶಾತ್ ತಾಯಿಗೆ ಸೋಂಕಿದ್ದರೂ ಮಗುವಿಗೆ ಸೋಂಕು ತಗುಲಿರಲಿಲ್ಲ. ಅಂದು ಹೆರಿಗೆಯಾದ ವೇಳೆ ಜಿಲ್ಲಾಸ್ಪತ್ರೆಗೆ ಡಿಸಿ ಎಸ್.ಎಸ್.ನಕುಲ್ ಭೇಟಿ ನೀಡಿದ್ದರು. ಈ ವೇಳೆ ಬಾಣಂತಿಯನ್ನು ಹೇಗಿದ್ದೀರಮ್ಮಾ? ಚಿಕಿತ್ಸೆ ಚೆನ್ನಾಗಿ ಸಿಗುತ್ತಿದೆಯಾ ಎಂದು ಮಾತನಾಡಿಸಿದ್ದರು. ಜಿಲ್ಲಾಧಿಕಾರಿಗಳ ಈ ಕಾಳಜಿಗೆ ಮನಸೋತ ದಂಪತಿ ಇದೀಗ ತಮ್ಮ ಗಂಡು ಮಗುವಿಗೆ ಜಿಲ್ಲಾಧಿಕಾರಿ ನಕುಲ್ ಅವರ ಹೆಸರನ್ನೇ ನಾಮಕಾರಣ ಮಾಡಿದ್ದಾರೆ.

ಈ ವಿಷಯವನ್ನು ತಿಳಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಒಂದು ಕ್ಷಣ ಅಚ್ಚರಿಗೆ ಒಳಗಾಗಿದ್ದಾರೆ. ಅಲ್ಲದೆ ಅತೀವ ಸಂತಸ ವ್ಯಕ್ತಪಡಿಸಿದರು. ಇದೊಂದು ಅವಿಸ್ಮರಣೀಯ ಘಟನೆ.ನಿಜಕ್ಕೂ ಅಚ್ಚರಿಯಾಗುತ್ತಿದೆ. ದಂಪತಿಗೆ ಮತ್ತು ಮಗುವಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *