ಕಾಮಿಡಿ ಕಿಲಾಡಿ ಖ್ಯಾತಿಯ ಗೋವಿಂದೇಗೌಡಗೆ ಅಪಘಾತ- ಪ್ರಾಣಾಪಾಯದಿಂದ ಪಾರು

Public TV
2 Min Read

ಬೆಂಗಳೂರು: ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಖ್ಯಾತಿಯ ನಟ ಗೋವಿಂದೇಗೌಡ ಅಪಘಾತಕ್ಕೀಡಾಗಿದ್ದಾರೆ. ನಿನ್ನೆ ಸಂಜೆ ಚಿತ್ರೀಕರಣದ ವೇಳೆ ಅಪಘಾತ ಸಂಭವಿಸಿದ್ದು, ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ಕಾಮಿಡಿ ಕಿಲಾಡಿ ಖ್ಯಾತಿಯ ನಟ ಗೋವಿಂದೇಗೌಡ ಅವರು, ಯೋಗರಾಜ್ ಭಟ್ ಅವರ ಸಿನಿಮಾದ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಟ ಗೋವಿಂದೇಗೌಡ ಅವರಿಗೆ ಅಪಘಾತ ಉಂಟಾಗಿತ್ತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮೂಲಗಳ ಪ್ರಕಾರ ನಟ ಗೋವಿಂದೇಗೌಡ ಅವರಿಗೆ ಚಿತ್ರೀಕರಣದ ಸಂದರ್ಭದಲ್ಲಿ ಕಾರಿನ ಸಾಹಸ ದೃಶ್ಯದ ಶೂಟಿಂಗ್ ವೇಳೆಯಲ್ಲಿ ಹೊಟ್ಟೆಗೆ ಪೆಟ್ಟು ಬಿದ್ದಿರೋದಾಗಿ ತಿಳಿದು ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ ಕಾರಣದಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ನವರಸ ನಾಯಕ ಜಗ್ಗೇಶ್, ಕಾಮಿಡಿಕಿಲಾಡಿ ನಟ ಜಿಜಿ ಗೋವಿಂದೇಗೌಡನಿಗೆ ಚಿತ್ರೀಕರಣ ಸಮಯದಲ್ಲಿ ಅಪಘಾತವಾಗಿ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ದಯಮಾಡಿ ಅವನಿಗೆ ಏನು ಆಗದಂತೆ ನೀವು ಪ್ರಾರ್ಥನೆ ಮಾಡಿ. ನಾನು ಗಣಪತಿಗೆ ಪ್ರಾರ್ಥಿಸಿ ಆಸ್ಪತ್ರೆಗೆ ಹೊರಟೆ ಎಂದು ತಿಳಿಸಿದ್ದಾರೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಯೋಗರಾಜ್ ಭಟ್, ಒಂದು ಚಿಕ್ಕ ಅಪಘಾತವಾಗಿದೆ. ಗೋವಿಂದೇಗೌಡ ಅರಾಮಾಗಿದ್ದಾರೆ. ಚಿಕಿತ್ಸೆ ಬಳಿಕ ಮತ್ತೆ ಅವರು ಚಿತ್ರೀಕರಣಕ್ಕೆ ಮರಳಿದ್ದಾರೆ. ಈಗಷ್ಟೇ ನಾವೆಲ್ಲರೂ ಚಿತ್ರೀಕರಣ ಮುಗಿಸಿ ವಾಪಾಸ್ ಬಂದಿದ್ದೇವೆ ಎಂಬುದಾಗಿ ತಿಳಿಸಿದ್ದಾರೆ.

ಈ ಸಂಬಂಧ ನಟ ಜಗ್ಗೇಶ್ ಕೂಡ ಟ್ವೀಟ್ ಮಾಡಿದ್ದು, ಈಗ ತಾನೆ ಗೋವಿಂದೇಗೌಡನನ್ನ ಭೇಟಿ ಮಾಡಿದೆ. ರಾಯರ ಆಶೀರ್ವಾದದಿಂದ ಕ್ಷೇಮವಾಗಿದ್ದಾನೆ. ನಾನು, ಭಟ್ರು ಮತ್ತು ಶರಣ ಜೊತೆಗಿದ್ದೇವೆ. ನಿಮ್ಮ ಹಾರೈಕೆಯಿರಲಿ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *