ಕಾಫಿನಾಡಿಗೆ ಆತಂಕ ಸೃಷ್ಠಿಸಿದ ಕೈದಿ, ಪೊಲೀಸ್, ಎಂಜಿನಿಯರ್, ತರಕಾರಿ ವ್ಯಾಪಾರಿ

Public TV
1 Min Read

ಚಿಕ್ಕಮಗಳೂರು: ಏಳೆಂಟು ದಿನಗಳ ಹಿಂದೆ ಜೈಲಿನಲ್ಲಿದ್ದ ಕೈದಿಗೂ ಸೋಂಕು ದೃಢವಾಗಿದ್ದರಿಂದ ಜಿಲ್ಲೆಯ ಜನ ಕಂಗಾಲಾಗಿದ್ದರು. ಏಕಂದರೆ ಆರು ತಿಂಗಳಿಂದ ಜೈಲಿನಲ್ಲಿರುವ ಖ್ಯೆದಿಗೆ ಹೇಗೆ ಕೊರೊನಾ ಬಂತು ಎನ್ನುವುದು ಎಲ್ಲರಲ್ಲೂ ಪ್ರಶ್ನೆ ಹುಟ್ಟಿಸಿತ್ತು.

ಕಳೆದೊಂದು ವಾರದ ಹಿಂದೆ ನಾಲ್ವರು ಪೊಲೀಸರು ತೀವ್ರ ಆತಂಕ ಸೃಷ್ಠಿಸಿದ್ದರು. ಮೂರು ದಿನದ ಹಿಂದೆ ರಸ್ತೆ ಮೇಲೆ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುವ ವ್ಯಾಪಾರಿ ಕೂಡ ಭಯ ಹುಟ್ಟಿಸಿದ್ದ. ಬುಧವಾರ ಎಂಜಿನಿಯರ್ ಸರದಿ. ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆ ನಿವಾಸಿಯಾದ ಕೊರೊನಾ ಸೋಂಕಿತ ಎಂಜಿನಿಯರ್ ಕೂಡ ಸರ್ಕಾರಿ, ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ದಾದಿಯರಲ್ಲೂ ಭೀತಿ ಹುಟ್ಟಿಸಿದ್ದಾರೆ.

ಜಿಲ್ಲೆಯಲ್ಲಿ ಬುಧವಾರ ಒಂದು ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿದೆ. ಬೆಂಗಳೂರಿಗೆ ಹೋಗಿ ಬಂದ 28 ವರ್ಷದ ಎಂಜಿನಿಯರ್ ಯುವಕನಲ್ಲಿ ಸೋಂಕು ದೃಢವಾಗಿದ್ದು, ಆತ ಕೂಡ ಚಿಕ್ಕಮಗಳೂರು ನಗರ ನಿವಾಸಿಗಳ ನಿದ್ದೆಗೆಡಿಸಿದ್ದಾನೆ. ಕೊರೊನಾ ಆರಂಭವಾದ ಮೂರು ತಿಂಗಳ ಬಳಿಕ ಚಿಕ್ಕಮಗಳೂರು ನಗರದಲ್ಲಿ ಅಧಿಕೃತ ದಾಖಲಾದ ಮೊದಲ ಪ್ರಕರಣವಿದು. ಇಲ್ಲಿವರೆಗೂ ನಗರದಲ್ಲಿ ಒಂದೇ ಒಂದು ಕೇಸ್ ಇರಲಿಲ್ಲ.

ಬೆಂಗಳೂರಿಗೆ ಹೋಗಿ ಹಿಂದುರಿಗಿದ ಎಂಜಿನಿಯರ್ ಆರೋಗ್ಯ ಸಮಸ್ಯೆಯಿಂದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೂ ಭೇಟಿ ನೀಡಿದ್ದ. ಬುಧವಾರ ಆತನಿಗೆ ಕೊರೊನಾ ದೃಢವಾದ ಹಿನ್ನೆಲೆ ಸರ್ಕಾರಿ, ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ದಾದಿಯರಿಗೂ ಆತಂಕ ಸೃಷ್ಟಿಯಾಗಿದೆ. ಸೋಂಕಿತನ ಮನೆಯವರು ಸೇರಿದಂತೆ ವೈದ್ಯರು, ದಾದಿಯರು ಎಲ್ಲರಿಗೂ ಕ್ವಾರಂಟೈನ್‍ಗೆ ಸೂಚಿಸಲಾಗಿದೆ.

ಈ ಮಧ್ಯೆ ಮೂರು ದಿನಗಳ ಹಿಂದೆ ಬಂದ ಪ್ರಕರಣ ಕೂಡ ನಗರಕ್ಕೆ ಕಂಟಕವಾಗಿದೆ. ಹಾಸನ ಮಾರುಕಟ್ಟೆಗೆ ಹೋಗಿ ತರಕಾರಿ ತಂದು ಚಿಕ್ಕಮಗಳೂರು ನಗರದಲ್ಲಿ ಮಾರುತ್ತಿದ್ದ ವ್ಯಕ್ತಿಗೂ ಸೋಂಕು ದೃಢವಾಗಿದ್ದು, ನಗರದ ಹಲವು ಏರಿಯಾಗಳ ಜನ ಕೂಡ ಕಂಗಾಲಾಗಿದ್ದಾರೆ. ಬುಧವಾರದ ಪ್ರಕರಣದಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 43ಕ್ಕೆ ಏರಿದೆ. 23 ಜನ ಬಿಡುಗಡೆಯಾಗಿ, 19 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹೆಮ್ಮಾರಿಗೆ 72 ವರ್ಷದ ವೃದ್ಧೆ ಪ್ರಾಣ ತೆತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *