ಕಾಫಿನಾಡಲ್ಲಿ ವೈದ್ಯ, ಕಂಡಕ್ಟರ್, ಪೇದೆಗೆ ಕೊರೊನಾ

Public TV
1 Min Read

ಚಿಕ್ಕಮಗಳೂರು: ಕಳೆದ 45 ದಿನಗಳಿಂದ ಬರುತ್ತಿರುವ ಒಂದು-ಎರಡು ಕೇಸ್ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 85ರ ಗಡಿ ತಲುಪಿದ್ದು, ದಿನ ಕಳೆದಂತೆ ಜಿಲ್ಲೆಯ ಜನರ ಆತಂಕ ಕೂಡ ಹೆಚ್ಚಾಗುತ್ತಿದೆ. ಇಂದು ಜಿಲ್ಲೆಯಲ್ಲಿ ಮೂರು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಮೂರು ಹೊಸ ಪ್ರಕರಣಗಳಲ್ಲಿ ಓರ್ವ ವೈದ್ಯ, ಮತ್ತೋರ್ವ ಸರ್ಕಾರಿ ಬಸ್ ಕಂಡಕ್ಟರ್, ಮಗದೊಬ್ಬ ಬೆಂಗಳೂರಿನಿಂದ ಹಿಂದಿರುಗಿದ ಪೇದೆ. ವೈದ್ಯ ಹಾಗೂ ಕಂಡಕ್ಟರ್ ಈ ಎರಡೂ ಪ್ರಕರಣಗಳು ಜಿಲ್ಲಾಡಳಿತ ಹಾಗೂ ಜನರ ಆತಂಕವನ್ನು ಹೆಚ್ಚಾಗಿಸಿವೆ. ವೈದ್ಯ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಯ ಕೆಲಸ ಮಾಡುತ್ತಿದ್ದು, ಇದೀಗ ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಲಾಗಿದೆ.

ವೈದ್ಯಗೆ ಕೊರೊನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಕಂಡಕ್ಟರ್ ಕೂಡ ಜಿಲ್ಲೆಯ ಕಡೂರು ತಾಲೂಕಿನ ಚೌಳಹಿರಿಯೂರಿನವರು. ಪ್ರತಿದಿನ ಅರಸೀಕೆರೆಯಿಂದ ಹಾಸನ ಮಾರ್ಗವಾಗಿ ಓಡಾಡುತ್ತಿದ್ದರು. ಕೆಲಸ ಮುಗಿಸಿ ಅರಸೀಕೆರೆಯಿಂದ ಚೌಳಹಿರಿಯೂರಿನ ಮನೆಗೆ ಬೈಕ್ ಮೂಲಕ ಬರುತ್ತಿದ್ದರು. ಇದೀಗ ಕಂಡಕ್ಟರ್‍ ಗೂ ಕೊರೊನಾ ಸೋಂಕು ತಗುಲಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ಕಂಡಕ್ಟರ್ ಗೆ ಕೊರೊನಾ ಹೇಗೆ ಬಂದಿತು ಎಂಬುದರ ಜೊತೆಗೆ ಇವರು ಎಷ್ಟು ಜನರಿಗೆ ಸೋಂಕು ಹಚ್ಚಿದ್ದಾರೆ ಎಂಬ ಭಯ ಸಹ ಹೆಚ್ಚಾಗಿದೆ. ಕಂಡಕ್ಟರ್ ಗ್ರಾಮದಲ್ಲಿ ತೋಟ-ಮನೆಗೆಲ್ಲ ಓಡಾಡಿದ್ದಾರೆ. ಈಗಾಗಲೇ ತಾಲೂಕು ಆಡಳಿತ ಕಂಡಕ್ಟರ್ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಹನ್ನೆರಡಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲು ಸೂಚಿಸಿದೆ. ಬೆಂಗಳೂರಿನ ಪೊಲೀಸ್ ತರಬೇತಿ ಕೇಂದ್ರದಲ್ಲಿನ ಪೇದೆಗೂ ಕೊರೊನಾ ಪಾಸಿಟಿವ್ ಬಂದಿದ್ದು, ಅವರ ಪ್ರಾಥಮಿಕ ಸಂಪರ್ಕದವರನ್ನು ಪತ್ತೆ ಹಚ್ಚಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *