ಕಾಂಚಾಣಕ್ಕಾಗಿ ಸರ್ಕಾರದಲ್ಲಿ ಫೈಲ್‍ಗಳು ಕಾಯುತ್ತಿವೆ- ಸಚಿವರ ವಿರುದ್ಧ ವಿಶ್ವನಾಥ್ ವಾಗ್ದಾಳಿ

Public TV
1 Min Read

ಮೈಸೂರು: ಕಾಂಚಾಣಕ್ಕಾಗಿ ಸರ್ಕಾರದಲ್ಲಿ ಫೈಲ್‍ಗಳು ಕಾಯುತ್ತಿವೆ. ಒಂದು ಸಣ್ಣ ಸಹಿಗಾಗಿ ಫೈಲ್‍ಗಳು ತಿಂಗಳುಗಟ್ಟಲೇ ಸಚಿವರ ಮುಂದೆ ಬಿದ್ದಿವೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಮ್ಮದೇ ಸರ್ಕಾರದ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಿ.ಟಿ.ರವಿ ಬಳಿ ಕೆಲ ಬಿಜೆಪಿ ಶಾಸಕರು ಹೇಳಿರುವುದು ಸತ್ಯ. ಸರ್ಕಾರದಲ್ಲಿ ಫೈಲ್ ಮೂವ್ಮೆಂಟ್ ವಿಳಂಬ ಆಗುತ್ತಿದೆ. ಅದು ಸ್ವಪಕ್ಷ, ಪರಪಕ್ಷ ಅಂತೇನಿಲ್ಲ. ನನ್ನವೇ ಎಷ್ಟೋ ಫೈಲ್‍ಗಳು ಇನ್ನೂ ಕಾಯುತ್ತ ಕುಳಿತಿವೆ. ಫೈಲ್‍ಗಳು ಮುಂದಕ್ಕೆ ಹೋಗದೆ ಇರೋದರ ಅರ್ಥವೇನು? ವಾಟ್ ಈಸ್ ಇಟ್ ಮೀನ್ಸ್? ಇದರ ಉದ್ದೇಶ ಕಾಂಚಾಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕೆಲವು ಸಚಿವರಿಂದ ಇದು ನನಗು ಅನುಭವ ಆಗಿದೆ. ತಿಂಗಳಾನುಗಟ್ಟಲೇ ಮಂತ್ರಿಗಳು ಫೈಲ್‍ಗಳನ್ನ ಕೊಳೆಸೋದು ಸರಿಯಲ್ಲ. ಮಂತ್ರಿಗಳು ಇದರಿಂದ ಎಚ್ಚೆತ್ತುಕೊಳ್ಳಬೇಕು. ನಾವೂ ಮಂತ್ರಿಗಿರಿ ಮಾಡಿದ್ದೇವೆ. ಯಾವ ಫೈಲ್, ಎಷ್ಟು ದಿನ, ಯಾರ ಬಳಿ ಇರಬೇಕು ಎಂದು ನಮಗೂ ಗೊತ್ತಿದೆ. ಇದೆಲ್ಲವೂ ಯಡಿಯೂರಪ್ಪನವರಿಗೆ ಗೊತ್ತಿದೆ. ಅವರ ಕೈಯಲ್ಲೂ ಇದನ್ನು ಸರಿ ಮಾಡಲು ಆಗುತ್ತಿಲ್ಲ. ಸಿ.ಟಿ.ರವಿ ಇದನ್ನು ಹೈಕಮಾಂಡ್ ಗಮನಕ್ಕೆ ತರುತ್ತಾರೆ ಎಂದರು.

ಫೈಲ್ ಮೂವ್ಮೆಂಟ್ ವಿಚಾರ ಸಿದ್ದರಾಮಯ್ಯ ಕಾಲದಿಂದಲೂ ಕೈ ಮಿರಿದೆ. ಸಿದ್ದರಾಮಯ್ಯ ಯಾವ ಮಂತ್ರಿಗೂ ಲಗಾಮು ಹಾಕಿರಲಿಲ್ಲ. ಅದರ ಮುಂದುವರಿದ ಭಾಗವೇ ಇದು ಎಂದು ಸಿದ್ದರಾಮಯ್ಯ ವಿರುದ್ಧ ಸಹ ಎಚ್.ವಿಶ್ವನಾಥ್ ಹರಿಹಾಯ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *