ಕರ್ರನ್ ತಾಳ್ಮೆಯ ಆಟ, ಅರ್ಧ ಶತಕ ವಿಫಲ- ಕೋಲ್ಕತ್ತಾಗೆ 37 ರನ್‍ಗಳ ಗೆಲುವು

Public TV
3 Min Read

– ಕೊನೆಯ 2 ಓವರ್ ನಲ್ಲಿ ಅಬ್ಬರಿಸಿದ ಕರ್ರನ್

ದುಬೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಎರಡರಲ್ಲೂ ಸಮತೋಲನ ಕಾಯ್ದುಕೊಳ್ಳುವ ಮೂಲಕ ಕಡಿಮೆ ರನ್ ಗಳಿಸಿದರೂ ರಾಜಸ್ಥಾನ ರಾಯಲ್ಸ್  ವಿರುದ್ಧ 37 ರನ್‌ ಗಳಿಂದ ಗೆದ್ದುಕೊಂಡಿದೆ.

ಅರ್ಧ ಶತಕ ವಂಚಿತ ಶುಭಮನ್ ಗಿಲ್, ಐಯಾನ್ ಮಾರ್ಗನ್ ಹಾಗೂ ಆಂಡ್ರೆ ರಸಲ್ ಅವರ ಅಬ್ಬರದ ಆಟ ಹಾಗೂ ಬೌಲರ್ ಗಳಾದ ಶಿವಂ ಮಾವಿ, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಕಬಳಿಸಿ ಮಿಂಚಿದರು. ಇದರಿಂದಾಗಿ ಸುಲಭವಾಗಿ ರಾಜಸ್ಥಾನದ ವಿರುದ್ಧ ಗೆಲುವು ಸಾಧಿಸಲು ಅನುಕೂಲವಾಯಿತು. ಶುಭಮನ್ ಗಿಲ್ 34 ಎಸೆತಕ್ಕೆ 47 ರನ್ ಗಳಿಸುವ ಮೂಲಕ ಉತ್ತಮ ಆರಂಭಿಕ ಆಟವಾಡಿದರೂ, ಅರ್ಧ ಶತಕ ವಂಚಿತರಾದರು. ನಂತರ ನಿತೀಶ್ ರಾಣಾ ಆಗಮಿಸಿ 17 ಬಾಲ್‍ಗೆ 22ರನ್ ಸಿಡಿಸುವ ಮೂಲಕ ಉತ್ತಮ ಆಟವಾಡುವ ಭರವಸೆ ನೀಡಿದರೂ ನಂತರ ವಿಕೆಟ್ ಒಪ್ಪಿಸಿದರು.

11ನೇ ಓವರ್ ಗೆ ಆಂಡ್ರೆ ರಸಲ್ ಆಗಮಿಸಿ 3 ಸಿಕ್ಸ್ ಬಾರಿಸುವ ಮೂಲಕ ಅಬ್ಬರದ ಆಟವಾಡಿ 14 ಬಾಲ್‍ಗೆ 24 ರನ್ ಗಳಿಸಿ ತಂಡವನ್ನು ಒಂದು ಹಂತಕ್ಕೆ ತಂದಿದ್ದರು. ನಂತರ ಐಯಾನ್ ಮಾರ್ಗನ್ 23 ಬಾಲ್‍ಗೆ 34 ರನ್ ಗಳಿಸಿ, ರಾಜಸ್ಥಾನ ರಾಯಲ್ಸ್‍ಗೆ 175 ರನ್‍ಗಳ ಗುರಿಯನ್ನು ನೀಡಲಾಗಿತ್ತು.

ಕೋಲ್ಕತ್ತಾ ನೀಡಿದ್ದ 175 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ, ಪವರ್ ಪ್ಲೇ ಹಂತದಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡಿತು. ಕೊನೆಯವರೆಗೂ ತಾಳ್ಮೆ ಕಳೆದುಕೊಳ್ಳದೇ ಆಡುವ ಮೂಲಕ ಅರ್ಧ ಶತಕ ಬಾರಿಸಿದ ಟಾಮ್ ಕರ್ರನ್ ಅವರ ಪಂದ್ಯ ಗೆಲ್ಲಿಸುವ ಪ್ರಯತ್ನ ವಿಫಲವಾಗಿದ್ದು, ಈ ಮೂಲಕ 37 ರನ್‍ಗಳ ಅಂತರದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದೆ.

ಕೋಲ್ಕತ್ತಾ ತಂಡ ಬೌಲಿಂಗ್ ಅಬ್ಬರಕ್ಕೆ ರಾಜಸ್ಥಾನ ರಾಯಲ್ಸ್ ತಂಡದ ಬಹುತೇಕ ದಾಂಡಿಗರು ಸಿಂಗಲ್ ಡಿಜಿಟ್‍ಗೆ ಔಟಾಗಿದ್ದಾರೆ. ವಿಕೆಟ್ ಕಬಳಿಸುವ ತನ್ನ ಓಟವನ್ನು ಮುಂದುವರಿಸಿದ್ದ ಬೌಲರ್ ಗಳು ಬಹುತೇಕರನ್ನು ಒಂದಂಕಿಗೇ ಪೆವಿಲಿಯನ್‍ಗೆ ಕಳುಹಿಸಿದ್ದರು. ಇದರಿಂದಾಗಿ ರಾಜಸ್ಥಾನ ತಂಡಕ್ಕೆ ತೀವ್ರ ಆಘಾತವಾಯಿತು.

ಈ ಮೂಲಕ ಕಡಿಮೆ ಟಾರ್ಗೆಟ್ ನೀಡಿದರೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪಂದ್ಯವನ್ನು ತನ್ನದಾಗಿಸಿಕೊಂಡಿದೆ. ಟಾಮ್ ಕರ್ರನ್ ತಾಳ್ಮೆಯ ಆಟವಾಡಿ 3 ಸಿಕ್ಸ್, 2 ಫೋರ್ ಚೆಚ್ಚುವ ಮೂಲಕ 36 ಬಾಲ್‍ಗೆ 54ರನ್ ಹೊಡೆದು ತಂಡವನ್ನು ಗೆಲ್ಲಿಸಲು ಯತ್ನಿಸಿದರು. ಆದರೆ ಅಂತರ ತುಂಬಾ ಇದ್ದಿದ್ದರಿಂದ ಸಾಧ್ಯವಾಗಲಿಲ್ಲ. ಆದರೆ ರಾಜಸ್ಥಾನ ಹೀನಾಯವಾಗಿ ಸೋಲುವುದನ್ನು ತಡೆದರು.

ಹತ್ತನೇ ಓವರ್ ಗೆ ಬರುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸೋಲುವ ಮುನ್ಸೂಚನೆಯನ್ನು ರಾಜಸ್ಥಾನ ನೀಡಿತು. ಆರಂಭಿಕ ಆಟಗಾರರಾದ ಜೋಸ್ ಬಟ್ಲರ್ ಎಷ್ಟೇ ಪ್ರಯತ್ನಿಸಿದರು ಹೆಚ್ಚು ರನ್ ಚೆಚ್ಚಲು ಸಾಧ್ಯವಾಗಲಿಲ್ಲ. 16 ಬಾಲ್‍ಗೆ ಕೇವಲ 21ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅವರ ಹಿಂದೆಯೇ ಸ್ಟೀವನ್ ಸ್ಮಿತ್ ಸಹ 7 ಬಾಲ್‍ಗೆ 3 ರನ್ ಗಳಿಸಿ ಪೆವಿಲಿಯನ್ ಸೇರಿದರು ಈ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

ನಂತರ ಬಂದ ಸಂಜು ಸ್ಯಾಮ್ಸನ್(9 ಬಾಲ್‍ಗೆ 8 ರನ್), ರಾಬಿನ್ ಉತ್ತಪ್ಪ (7 ಬಾಲ್‍ಗೆ 2ರನ್), ರಿಯಾನ್ ಪರಾಗ್(6 ಬಾಲ್‍ಗೆ 1ರನ್), ರಾಹುಲ್ ತೆವಾಟಿಯಾ (10 ಬಾಲ್‍ಗೆ 14ರನ್), ಶ್ರೀಯಾಸ್ ಗೋಪಾಲ್(7 ಬಾಲ್‍ಗೆ 5 ರನ್), ಜಯದೇವ್ ಉನಾದ್ಕಟ್(5 ಬಾಲ್‍ಗೆ 4ರನ್) ಸಹ ಉತ್ತಮ ಪ್ರದರ್ಶನ ತೋರಲಿಲ್ಲ ಹೀಗಾಗಿ ಹೀನಾಯವಾಗಿ ಪಂದ್ಯವನ್ನು ಸೋಲಬೇಕಾಯಿತು.

ಬಟ್ಲರ್, ತೆವಾಟಿಯಾ, ಕರ್ರನ್ ಹೊರತು ಪಡಿಸಿದರೆ ಉಳಿದೆಲ್ಲರೂ ಸಿಂಗಲ್ ಡಿಜಿಟ್‍ಗೆ ಔಟಾಗುವ ಮೂಲಕ ಪಂದ್ಯವನ್ನು ಸೋಲಿನ ಸುಳಿಗೆ ಸಿಲುಕಿಸಿದರು. 18 ಓವರ್ ಮುಗಿಯುವ ಹೊತ್ತಿಗೆ ಅಬ್ಬರ ಆಟ ಆಡುವ ಪ್ರಯತ್ನದಲ್ಲಿ ಸಿಕ್ಸರ್ ಬಾರಿಸಲು ಹೋಗಿ ಜಯದೇವ್ ಉನಾದ್ಕಟ್ ಕ್ಯಾಚ್ ನೀಡಿದರು.

ಕೋಲ್ಕತ್ತಾ ಬೌಲರ್ಸ್ ಶಿವಂ ಮಾವಿ, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಉಳಿದಂತೆ ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್ ಹಾಗೂ ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ಕಬಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *