ಕರ್ನಾಟಕದ ನಿರ್ಮಾಪಕ ಕೋಟಿ ರಾಮು ಇನ್ನಿಲ್ಲ

Public TV
1 Min Read

ಬೆಂಗಳೂರು: ನಿರುದ್ಯೋಗಿ ಸ್ನೇಹಿತರುಗಳನ್ನು ಫೀಲ್ಡ್ ಗೆ ಕರೆತಂದು ಸಿನಿಮಾ ವಿತರಣೆಯನ್ನು ವಿಸ್ತರಿಸಿ ಹಲವರಿಗೆ ಬದುಕು ಕಟ್ಟಿಕೊಟ್ಟ ಸೃಜನಶೀಲ ನಿರ್ಮಾಪಕ ರಾಮು ಅವರು ನಿಧನರಾಗಿದ್ದಾರೆ.

ಉಸಿರಾಟದ ತೊಂದರೆ, ಫುಡ್ ಪಾಯಿಸನ್ ನಿಂದ ಬಳಲುತ್ತಿದ್ದ ರಾಮು ಅವರು ಮೂರು ದಿನಗಳ ಹಿಂದೆ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಈ ನಡುವೆ ಕೊರೊನಾ ಪಾಸಿಟಿವ್ ಬಂದಿತ್ತು. ಇಂದು ರಾತ್ರಿ 7:30ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ

40 ಕ್ಕೂ ಹೆಚ್ಚು ಸಿನಿಮಾಗಳನ್ನ ನಿರ್ಮಿಸಿದ್ದ ರಾಮು ಅವರ ಶ್ವಾಸಕೋಶಕ್ಕೆ ಸೋಂಕು ತೀವ್ರವಾಗಿ ತಗಲಿತ್ತು. ಕನ್ನಡ ಚಿತ್ರರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನ ನಿರ್ಮಿಸುತ್ತಿದ್ದ ಕಾರಣ ಸ್ಯಾಂಡಲ್‍ವುಡ್‍ನಲ್ಲಿ ಅವರಿಗೆ ‘ಕೋಟಿ ರಾಮು’ ಎಂಬ ಹೆಸರು ಬಂದಿತ್ತು.

ಕನ್ನಡದ ಸುಮಾರು ಎಲ್ಲಾ ಸ್ಟಾರ್ ನಟರಿಗೆ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಇವರ ಚಿತ್ರಗಳಲ್ಲಿ ವಿಶೇಷವಾಗಿ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಭಾರೀ ಹಣವನ್ನು ಖರ್ಚು ಮಾಡಲಾಗುತ್ತಿತ್ತು.

ರಾಮು ಅವರು ಕನ್ನಡದಲ್ಲಿ ಅದ್ದೂರಿ ಚಿತ್ರಗಳ ಟ್ರೆಂಡ್ ಹುಟ್ಟು ಹಾಕಿದಂತಹ ನಿರ್ಮಾಪಕ. ಲಾಕಪ್ ಡೆತ್, ಎಕೆ 47, ಕಲಾಸಿಪಾಳ್ಯ, ಮುಂತಾದ ಸೂಪರ್ ಹಿಟ್ ಚಿತ್ರಗಳ ನಿರ್ಮಾಪಕರಾಗಿ ಕನ್ನಡಕ್ಕೆ ಹೊಸ ರೀತಿಯ ಚಿತ್ರಗಳನ್ನು ಕೊಡುಗೆಯಾಗಿ ಕೊಟ್ಟಿದ್ದರು, ನಿರ್ಮಾಪಕರಾಗಿ, ವಿತರಕರಾಗಿ ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಬಹಳ ದೊಡ್ಡದು. ಖ್ಯಾತ ನಟಿ ಮಾಲಾಶ್ರೀ ಅವರನ್ನ ವರಿಸಿ ಅವರನ್ನೇ ಮುಖ್ಯಭೂಮಿಕೆಯಲ್ಲಿ ಇಟ್ಟುಕೊಂಡು ಅನೇಕ ಚಿತ್ರಗಳನ್ನು ಕೊಡುಗೆಯಾಗಿ ಕೊಟ್ಟಿದ್ದರು.

ಸುಬ್ರಹ್ಮಣ್ಯ ನಗರದಲ್ಲಿ ಚಿಲ್ಲರೆ ಅಂಗಡಿ ವ್ಯಾಪಾರದಿಂದ ಬದುಕು ಆರಂಭಿಸಿದ ಸುಂದರ ಯುವಕ ರಾಮು ಕೋಟಿ ನಿರ್ಮಾಪಕ ಎನ್ನಿಸಿಕೊಂಡರು. ತೆಲುಗು ಸಿನಿಮಾಗಳ ವಿತರಣೆಯಿಂದ ಲಾಭ ಗಳಿಸಿ ಓಂ ಪ್ರಕಾಶ್ ರಾವ್ ಜತೆಗೂಡಿ ಕನ್ನಡ ಸಿನಿಮಾ ನಿರ್ಮಿಸಿ ಹೆಸರುಗಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *