ಕರು ತಪ್ಪಿಸಲು ಹೋಗಿ ಕಾರು ಪಲ್ಟಿ- ಮೂವರ ಸ್ಥಿತಿ ಗಂಭೀರ

Public TV
1 Min Read

– ಬಾವಿ ಅಗೆಯುವಾಗ ಮಣ್ಣು ಕುಸಿದು ಕಾರ್ಮಿಕ ಸಾವು

ಚಿಕ್ಕಮಗಳೂರು: ರಸ್ತೆ ಮಧ್ಯೆ ಕಾರಿಗೆ ಅಡ್ಡ ಬಂದ ಕರುವನ್ನ ತಪ್ಪಿಸಲು ಹೋಗಿ ಇನ್ನೋವಾ ಕಾರು ಪಲ್ಟಿಯಾಗಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಬ್ಬರಿಗೆ ಗ್ರಾಮದ ಬಳಿ ನಡೆದಿದೆ.

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದೆ, ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದ ಕೃಷ್ಣಮೂರ್ತಿ, ವೀಣಾ ಹಾಗೂ ಚಾಲಕ ಮೂವರು ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ಕಾರು ಹೊಂಡಕ್ಕೆ ಪಲ್ಟಿಯಾದ ರಭಸಕ್ಕೆ ಕೃಷ್ಣಮೂರ್ತಿ ಅವರಿಗೆ ಕಾಲು ಮುರಿದಿದ್ದು, ಮೂವರಿಗೂ ಗಂಭೀರ ಗಾಯಗಳಾಗಿವೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯ ಕಳಸ ತಾಲೂಕಿನಲ್ಲಿ ಬಾವಿ ಅಗೆಯುವಾಗ ಮಣ್ಣು ಕುಸಿದು ಕಾರ್ಮಿಕ ಸ್ಥಳದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮೃತ ಕಾರ್ಮಿನನ್ನು 45 ವರ್ಷದ ಮನೋಜ್ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಕಳಸ ತಾಲೂಕಿನ ಯಡೂರು ಬಳಿ ಬಾವಿ ಅಗೆಯುವಾಗ ದುರಂತ ಸಂಭವಿಸಿದೆ. ನಿನ್ನೆ ಕಳಸ ಸುತ್ತಮುತ್ತ ಭಾರೀ ಮಳೆ ಸುರಿದಿತ್ತು. ಈ ಹಿನ್ನೆಲೆ ಮಣ್ಣು ತೇವಾಂಶದಿಂದ ಕೂಡಿದ್ದು, ಇಂದು ಬಾವಿ ಪಕ್ಕದಲ್ಲಿ ಮಣ್ಣು ಅಗೆಯುವಾಗ ಏಕಾಏಕಿ ಮಣ್ಣು ಕುಸಿದು ಬಿದ್ದಿದ್ದರಿಂದ ಮೇಲೆ ಏಳಲು ಸಾಧ್ಯವಾಗದೇ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *