ಕರಾವಳಿ, ಕೊಡಗಿನಲ್ಲಿ ಧಾರಾಕಾರ ಮಳೆ- ಮಂಗ್ಳೂರಲ್ಲಿ ಫ್ಲ್ಯಾಟ್ ಹಿಂಭಾಗದ ಮಣ್ಣು ಕುಸಿತ

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಮಳೆ ಭೀತಿ ಹುಟ್ಟಿಸಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಗುರುವಾರ ರಾತ್ರಿ, ಇಂದು ಧಾರಾಕಾರ ಮಳೆಯಾಗಿದೆ.

ಬೆಳಗಾವಿಯ ಬೈಲಹೊಂಗಲ ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದ್ದು, ಇಂಗಳಗಿ ಗ್ರಾಮದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಕಾರವಾರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆಯಾಗ್ತಿದೆ. ಮೀನುಗಾರಿಕೆ ನಿಷೇಧಿಸಲಾಗಿದೆ. ಕಾರವಾರ, ಕುಮಟಾ, ಹೊನ್ನಾವರ ಸೇರಿದಂತೆ ಬಹುತೇಕ ಭಾಗದಲ್ಲಿ ಇನ್ನೆರೆಡು ದಿನ ಇದೇ ಸ್ಥಿತಿ ಇರಲಿದೆ.

ಭಟ್ಕಳದ ಬಳಿ ಸಮುದ್ರದ ಮಧ್ಯೆ ಬಿರುಗಾಳಿಗೆ ಸಿಕ್ಕಿದ್ದ ಬೋಟ್‍ನಲ್ಲಿದ್ದ 24 ಮಂದಿಯನ್ನು ರಕ್ಷಿಲಾಗಿದೆ. ಮಂಗಳೂರು ಹೊರವಲಯದ ಜಪ್ಪಿನಮೊಗರು ಬಳಿ ನೂರಾರು ಮನೆಗಳು ಪ್ರವಾಹ ಸಿಲುಕಿವೆ. ಮಂಗಳೂರಿನ ಕೊಂಚಾಡಿಯಲ್ಲಿರುವ 12 ಅಂತಸ್ತಿನ ಎಸೆಲ್ ಹೈಟ್ಸ್ ಎಂಬ ಫ್ಲ್ಯಾಟ್ ಹಿಂಭಾಗದ ಧರೆ ಕುಸಿತವಾಗಿದ್ದು, ಮಣ್ಣಿನಡಿಯಲ್ಲಿ ಹಲವು ವಾಹನಗಳು ಸಿಲುಕಿವೆ. ಫ್ಲ್ಯಾಟ್ ನಲ್ಲಿದ್ದ ನೂರಾರು ಮಂದಿ ನಿವಾಸಿಗಳ ಸ್ಥಳಾಂತರಗೊಳಿಸಲಾಗಿದೆ. ಮುನ್ನಚ್ಚೆರಿಕಾ ಕ್ರಮವಾಗಿ ಫ್ಲಾಟ್ ನ ಮುಂಭಾಗದ ರಸ್ತೆ ಬಂದ್ ಮಾಡಲಾಗಿದ್ದು, ಸ್ಥಳದಲ್ಲಿ ಎಸ್‍ಡಿಆರ್‍ಎಫ್, ಎನ್‍ಡಿಆರ್‍ಫ್ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ.

ಕೊಡಗಿನಲ್ಲಿ ಕಳೆದ ರಾತ್ರಿ ಧಾರಾಕಾರ ಮಳೆಯಾಗಿದ್ದು, ತಲಕಾವೇರಿ, ಭಾಗಮಂಡಲ, ತ್ರಿವೇಣಿ ಸಂಗಮದ ಬಳಿ ಪ್ರವಾಹ ಸೃಷ್ಟಿಯಾಗೋ ಆತಂಕ ಮನೆ ಮಾಡಿದೆ. ಕೋಳಿಕಾಡು, ಚೇರಂಗಾಲ, ಕೋರಂಗಾಲ ಗ್ರಾಮಗಳಲ್ಲಿ ಭೂಕುಸಿತ ಆತಂಕ ಎದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *