ಕನ್ನಡಿಗರಿಗೆ ಮೋದಿ GST ಜೊತೆಗೆ RBI ಸಾಲ+ BJP ಬಡ್ಡಿ ಪಾವತಿಸೋ ಕರ್ಮ ಎದುರಾಗಿದೆ: ಪ್ರಿಯಾಂಕ್

Public TV
2 Min Read

ಬೆಂಗಳೂರು: ಕನ್ನಡಿಗರಿಗೆ ಮೋದಿ ಜಿಎಸ್‍ಟಿ ಜೊತೆಗೆ ಆರ್‌ಬಿಐ ಸಾಲ ಹಾಗೂ ಬಿಜೆಪಿ ಬಡ್ಡಿಯನ್ನೂ ಪಾವತಿಸುವ ಕರ್ಮ ಎದುರಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ಬೊಕ್ಕಸಕ್ಕೆ ಸಾಲದ ಹೊರೆ ಹೊರಿಸಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಅತಿವೃಷ್ಠಿ, ಅನಾವೃಷ್ಠಿಗಳಿಗೆ ಪರಿಹಾರ ಜೊತೆ ತೆರಿಗೆ ಪಾಲನ್ನೂ ನಿರಾಕರಿಸಿರುವ ಬಿಜೆಪಿಯ ಈ ನಡೆಯಿಂದಾಗಿ, ಕನ್ನಡಿಗರಿಗೆ ಮೋದಿ ಜಿಎಸ್‍ಟಿ ಜೊತೆಗೆ ಆರ್‌ಬಿಐ ಸಾಲ + ಬಿಜೆಪಿ ಬಡ್ಡಿಯನ್ನೂ ಪಾವತಿಸುವ ಕರ್ಮ ಎದುರಾಗಿದೆ ಎಂದಿದ್ದಾರೆ.

ವ್ಯಾಟ್ ಜಾರಿಯಲ್ಲಿದ್ದಾಗ ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು ಸಿಗುತ್ತಿತ್ತು. ಯುಪಿಎ ಸರ್ಕಾರ ರೂಪಿಸಿದ್ದ ಉತ್ತಮ ಜಿಎಸ್‍ಟಿ ಕಾಯ್ದೆಯನ್ನು ನರೇಂದ್ರ ಮೋದಿ ಅವರ ಸರ್ಕಾರ ಅವೈಜ್ಞಾನಿಕವಾಗಿ ಬದಲಾವಣೆ ಮಾಡಿ ಜಾರಿಗೆ ತಂದಿದೆ. ಇದರಿಂದ ಆರ್ಥಿಕ ವ್ಯವಸ್ಥೆಗೆ ಹಾನಿಯಾಗಲಿದೆ ಎಂದು ಕಾಂಗ್ರೆಸ್ ಮೊದಲಿನಿಂದಲೂ ಹೇಳುತ್ತಾ ಬಂದಿದೆ ಎಂದು ತಿಳಿಸಿದ್ದಾರೆ.

ಪ್ರತಿಪಕ್ಷಗಳ ಮಾತನ್ನು ಕೇಳಿಸಿಕೊಳ್ಳದ ಸರ್ವಾಧಿಕಾರಿ ಧೋರಣೆಯ ಕೇಂದ್ರ ಸರ್ಕಾರ, ತಾನು ಮಾಡಿದ ತಪ್ಪಿಗೆ ದೇಶದ ಜನ ದಂಡ ಕಟ್ಟಬೇಕೆಂದು ಬಯಸುತ್ತಿರುವುದು ಅಸಹನೀಯ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಆರ್ಥಿಕ ಕುಸಿತ ಶುರುವಾಗಿದ್ದು, ಈಗ ಕೊರೊನಾದ ನೆಪ ಇಟ್ಟುಕೊಂಡು ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಗರಂ ಆಗಿದ್ದಾರೆ. ಇದನ್ನೂ ಓದಿ: ಅನ್‍ಲಾಕ್ ಬಳಿಕವೂ ಜಿಎಸ್‍ಟಿ ಆದಾಯದಲ್ಲಿಲ್ಲ ಏರಿಕೆ

ಭಾವನಾತ್ಮಕ ವಿಷಯಗಳನ್ನ ಕೇಂದ್ರಿಕರಿಸಿ ದ್ವೇಷ ರಾಜಕೀಯದಿಂದ ಅಭಿವೃದ್ಧಿಯನ್ನು ಹಳ್ಳ ಹಿಡಿಸಿದ ಬಿಜೆಪಿ, ತಾನು ಮಾಡಿದ ತಪ್ಪಿಗೆ ಜನ ದಂಡ ಕಟ್ಟಬೇಕೆಂದು ಬಯಸುತ್ತಿರುವುದು ಹಿಟ್ಲರ್ ಧೋರಣೆ. ಮುಖ್ಯಮಂತ್ರಿ ಬಿಎಸ್‍ವೈ ಪಕ್ಷದ ಮುಲಾಜಿಗೆ ಒಳಗಾಗದೆ, ರಾಜ್ಯದ ಹಿತದೃಷ್ಟಿಯಿಂದ ಕೇಂದ್ರ ಸಚಿವರ ಸಲಹೆಯನ್ನು ಸರಾಸಗಟಾಗಿ ತಿರಸ್ಕರಿಸಬೇಕಿದೆ.

ಕೇಂದ್ರ ಹಣಕಾಸು ಸಚಿವೆ ಸಲಹೆ ಒಪ್ಪಿಕೊಂಡು ಸಾಲ ಪಡೆದಿದ್ದೆ ಆದರೆ ಅದರ ಬಡ್ಡಿ ಹೊರೆಯನ್ನು ರಾಜ್ಯದ ಜನರು ಹೊರಬೇಕಾಗುತ್ತದೆ. ನಮ್ಮ ತೆರಿಗೆಯನ್ನು ಕೊಟ್ಟು, ಅದರ ಹಿಡಗಂಟಿನ ಮೇಲೆ ಸಾಲ ಪಡೆದು, ಅದಕ್ಕೆ ಮತ್ತೆ ನಾವೇ ಬಡ್ಡಿ ಕಟ್ಟುವುದು ಎಂತಹ ಶಿಕ್ಷೆ. 25 ಜನ ಸಂಸದರನ್ನು ಆರಿಸಿ ಕಳುಹಿಸಿದ್ದಕ್ಕಾಗಿ ಕನ್ನಡಿಗರಿಗೆ ಈ ಶಿಕ್ಷೆಯೇ ಎಂದು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *