ಗದಗ: ರೈತರು ಕೆಲಸ ಮುಗಿಸಿ ಜಮೀನಿನಿಂದ ಹೋಗುವುದನ್ನು ನೋಡಿದ ದುಷ್ಕರ್ಮಿಗಳು ಕಡಲೆ ರಾಶಿಗೆ ಯಾರೋ ಬೆಂಕಿ ಹಚ್ಚಿ ಪರಾರಿಯಾಗಿರವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ತೋಟಗಂಟಿ ಗ್ರಾಮದ ಜಮೀನಿನಲ್ಲಿ ಕಂಡುಬಂದಿದೆ.
ತೋಟಗಂಟಿ ಗ್ರಾಮದ ಕಳಕನಗೌಡ ಸಣ್ಣಮಲ್ಲನಗೌಡ್ರ ರೈತರಿಗೆ ಸೇರಿದ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಕಡಲೆ ಗೂಡಿಗೆ ಬೆಂಕಿಬಿದ್ದಿದೆ. ಈ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಕಡಲೆ ಬೆಳೆ ಸುಟ್ಟು ಕರಕಲಾಗಿದೆ. ಕಳೆದ 3 ದಿನದಿಂದ ಹತ್ತಾರು ಆಳುಗಳೊಂದಿಗೆ ಕಿತ್ತು ಒಂದೆಡೆ ಹಾಕಲಾಗಿತ್ತು. ರೈತರು ಮನೆಗೆ ಹೋಗುವುದನ್ನು ಕಂಡ ದುಷ್ಕರ್ಮಿಗಳು ಕಡಲೆ ಗೂಡಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ವಿಷಯ ತಿಳಿದ ರೈತರು ಜಮೀನಿಗೆ ಹೋಗಿ ನೋಡುವಷ್ಟರಲ್ಲಿ ಬೆಳೆ ಸುಟ್ಟು ಕಣ್ಮುಂದೆ ಭಸ್ಮವಾಗಿದೆ.
ಸಾಲ-ಸೂಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಯಲ್ಲಾ ಬೆಂಕಿಗಾಹುತಿಯಾಗಿದೆ. ಮೊದಲೇ ಕೊರೋನಾ, ಮುಂಗಾರು ಅತಿವೃಷ್ಟಿ ಹಿಂಗಾರು ಅನಾವೃಷ್ಟಿ ಸಂಕಷ್ಟದಲ್ಲಿರುವ ರೈತನ ಕಡಲೆ ಗೂಡಿಗೆ ಬೆಂಕಿ ತಗುಲಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ನೋವಿನಲ್ಲಿರುವ ರೈತನಿಗೆ ಸಂಬಂಧಿಸಿದ ಇಲಾಖೆಯವರು ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಅಬ್ಬಿಗೇರಿ ಗ್ರಾಮಲೆಕ್ಕಾಧಿಕಾರಿ ಜಿ.ಎ. ಜಂತ್ಲಿ , ನರೇಗಲ್ ಠಾಣೆಯ ಪಿಎಸ್ಐ ರಾಘವೇಂದ್ರ ಭೇಟಿ ನೀಡಿದರು ಪರಿಶೀಲನೆ ನಡೆಸಿದರು. ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.