ಕಂಪ್ಲೀಟ್ ಲಾಕ್‍ಡೌನ್ – ಪ್ರಧಾನಿ ನಿರ್ಧಾರಕ್ಕೆ ಕಾಯುತ್ತಿದೆ ರಾಜ್ಯ ಸರ್ಕಾರ

Public TV
1 Min Read

ಬೆಂಗಳೂರು: ಪೂರ್ಣವಾಗಿ ಲಾಕ್‍ಡೌನ್ ಮಾಡಬೇಕೇ? ಬೇಡವೇ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಈಗ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರಕ್ಕೆ ಕಾಯುತ್ತಿದೆ.

ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿನ್ನೆ ಸುಪ್ರಿಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಅನಿವಾರ್ಯವಾದರೆ ಲಾಕ್‍ಡೌನ್ ಮಾಡುವಂತೆ ಸೂಚನೆ ಕೊಟ್ಟಿದೆ. ಅದರ ಆಧಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಿರ್ಧಾರ ಮಾಡುತ್ತಾರೆ. ಅದರಂತೆ ರಾಜ್ಯ ಸರ್ಕಾರ ಕೂಡ ಪಾಲಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ನಷ್ಟು ಬಿಗಿ ನಿರ್ಧಾರದ ಬಗ್ಗೆ ಸೂಚನೆ ಪಾಲಿಸುತ್ತೇವೆ. ದೇಶದ ಪ್ರಧಾನಿಯವರು ಏನು ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾಯುತ್ತಿದ್ದೇವೆ. ಪ್ರಧಾನಿಯವರು ಸುಪ್ರಿಂ ಕೋರ್ಟ್ ನಿರ್ದೇಶನದ ಮೇಲೆ ಏನ್ ತೀರ್ಮಾನ ಮಾಡುತ್ತಾರೆ ಎಂಬುದನ್ನು ಗಮನಿಸಿಕೊಂಡು ಅವರ ನಿರ್ದೇಶನದ ಮೇರೆಗೆ ನಾವೂ ರಾಜ್ಯದಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ಲಾಕ್‍ಡೌನ್ ಆಗಿ ವಾರಗಳಾದ್ರೂ ಸೋಂಕು ನಿಯತ್ರಣಕ್ಕೆ ಬಂದಿಲ್ಲ. ಹಾಗಾಗಿ ಮೋದಿಯವರು ಯಾವ ರೀತಿಯ ಕ್ರಮಕ್ಕೆ ಸೂಚನೆ ಕೊಡುತ್ತಾರೆ ಅದರಂತೆ ನಾವೂ ಮುಂದುವರಿಯುತ್ತೇವೆ. ಈಗಾಗಲೇ ಎಲ್ಲಾ ಜಿಲ್ಲಾ ಮಂತ್ರಿಗಳು, ಆಯಾ ಜಿಲ್ಲೆಗಳಿಗೆ ಹೋಗಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಮೊದಲು ಮಾಜಿ ಮುಖ್ಯಮಂತ್ರಿಯವರಾದ ಕೆಸಿ ರೆಡ್ಡಿಯವರ 119ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಕೆಸಿ ರೆಡ್ಡಿಯವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಯಡಿಯೂರಪ್ಪ ಅವರ ವ್ಯಕ್ತಿತ್ವನ್ನು ಸ್ಮರಿಸಿಕೊಂಡರು. ಕೆ.ಸಿ ರೆಡ್ಡಿಯವರು ಕರ್ನಾಟಕದ ಮೊದಲ ಮುಖ್ಯಮಂತ್ರಿ, ಬಹುಮುಖ ಪ್ರತಿಭೆ. 3 ಬಾರಿ ದೇಶದ ಸ್ವಾತಂತ್ರ್ಯಕ್ಕಾಗಿ ಸೆರೆವಾಸ ಅನುಭವಿಸಿದ್ದರು. ಮೇರು ವ್ಯಕ್ತಿತ್ವದ ವ್ಯಕ್ತಿಯಾದ ಕೆಸಿ ರೆಡ್ಡಿಯವರು ವಿಧಾನ ಸೌಧ ನಿರ್ಮಾಣಕ್ಕೂ ಕೊಡುಗೆ ನೀಡಿದ್ದಾರೆ ಎಂದು ಹೇಳಿ ಸ್ಮರಿಸಿದರು.

Share This Article
Leave a Comment

Leave a Reply

Your email address will not be published. Required fields are marked *