ಕಂದನಿಗಾಗಿ ಕಾಯುತ್ತಿದ್ದ ಚಿರು, ಪತ್ನಿಗೆ ಗೊಂಬೆ ಗಿಫ್ಟ್

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರು ಅಪ್ಪನಾಗುತ್ತಿರುವ ಸಂಭ್ರಮದಲ್ಲಿದ್ದರು. ಆದರೆ ಮುದ್ದು ಕಂದ ಬರುವ ಮೊದಲೇ ಚಿರು ಇಹಲೋಕ ತ್ಯಜಿಸಿದ್ದಾರೆ.

ಚಿರಂಜೀವಿ ಸರ್ಜಾ ತಮ್ಮ ಮುದ್ದು ಕಂದನ ಬರುವಿಕೆಗಾಗಿ ಕಾತುರದಿಂದ ಕಾಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಮುದ್ದು ಮಡದಿ ಮೇಘನಾಗೆ ಒಂದು ಗೊಂಬೆಯನ್ನು ಕೂಡ ಗಿಫ್ಟಾಗಿ ನೀಡಿದ್ದರು.

ಈಗ ಮೇಘನಾ ಚಿರು ಇಲ್ಲದ ಹೊತ್ತಲ್ಲಿ ಆ ಮುದ್ದಾದ ಬೊಂಬೆಯನ್ನು ನೋಡುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಲ್ಲದೇ ಜೋಕಾಲಿ ಕಟ್ಟಿ ಬೊಂಬೆಗೆ ಲಾಲಿ ಹಾಡಿದ್ದಾರೆ. ಮುದ್ದು ಕಂದಮ್ಮನ ಮೇಲೆ ಎಷ್ಟು ಕನಸು, ಆಸೆಗಳನ್ನು ಇಟ್ಟುಕೊಂಡಿದ್ದರೂ ಎಂಬುದಕ್ಕೆ ಈ ಫೋಟೋ ಸಾಕ್ಷಿಯಾಗಿದೆ.

ಸದ್ಯಕ್ಕೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬೆಂಗಳೂರಿನ ಬಸವನಗುಡಿಯಿಂದ ಕನಕಪುರ ಬಳಿಯಿರುವ ಧ್ರುವ ಸರ್ಜಾ ಫಾರ್ಮ್ ಹೌಸ್‍ಗೆ ಚಿರಂಜೀವಿ ಸರ್ಜಾ ಪಾರ್ಥಿವ ಶರೀರವನ್ನು ರವಾನಿಸಲಾಗಿದೆ. ಕುಟುಂಬಸ್ಥರು ಕೂಡ ಕಾರಿನಲ್ಲಿ ಫಾರ್ಮ್ ಹೌಸ್‍ಗೆ ಹೋಗಿದ್ದಾರೆ.

ಚಿರಂಜೀವಿ ಸಾವಿನ ಸುದ್ದಿ ತಿಳಿದ ನಂತರ ನಟಿ ತಾರಾ ಅಳುತ್ತಾ ಆಸ್ಪತ್ರೆಯ ಮುಂದೆ ಮಾಧ್ಯಮಗಳ ಜೊತೆ ಮಾತನಾಡುವಾಗ ಮೇಘನಾ ರಾಜ್ ಗರ್ಭಿಣಿಯಾಗಿರುವ ವಿಚಾರವನ್ನು ನೋವಿನಿಂದ ಹೇಳಿದ್ದರು. ಮೊದಲು ಸುಳ್ಳು ಸುದ್ದಿ ಅಂತಾ ತಿಳಿದೆ. ನಂತರ ಸುಳ್ಳು ಸುದ್ದಿ ಆಗಲಿ ಅಂತಾ ಅಂದುಕೊಂಡು ಆಸ್ಪತ್ರೆಗೆ ಬಂದೆ. ಆದ್ರೆ ಚಿರು ಹೃದಯಾಘಾತದಿಂದ ಸಾವನ್ನಪ್ಪಿರೋದು ಖಚಿತವಾಯ್ತು. ಚಿರು ಕುಟುಂಬಕ್ಕೆ ದೇವರು ದುಃಖ ಬರಿಸೋ ಶಕ್ತಿ ನೀಡಲಿ ಎಂದು ಕಣ್ಣೀರು ಹಾಕಿದ್ದರು.

ಇದೇ ವೇಳೆ ಮೇಘಾನಾ ರಾಜ್ ತಾಯಿ ಆಗುತ್ತಿದ್ದಾರೆ. ಪುಟ್ಟ ಚಿರಂಜೀವಿ ಬರುತ್ತಿದ್ದಾನೆ ಎಂಬ ವಿಷಯವನ್ನು ತಿಳಿಸಿದ್ದರು. ಹಿರಿಯ ನಟ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ದಂಪತಿಯ ಪುತ್ರಿಯಾಗಿರೋ ಮೇಘನಾ, ಚಿರಂಜೀವಿಯನ್ನು ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದು ಮದುವೆ ಆಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *