-ಏಳು ಜನರ ಜೊತೆ ಮುಂಬೈನಿಂದ ಕಾಲ್ನಡಿಗೆಯಲ್ಲಿ ಪ್ರಯಾಣ
ಕಲಬುರಗಿ: ಕಂಕುಳಲ್ಲಿ ಹತ್ತು ತಿಂಗಳು ಕೂಸು ಮತ್ತು ತಲೆಯ ಮೇಲೆ ಚೀಲ ಹೊತ್ತ ತಾಯಿ ಸುಮಾರು 300 ಕಿ.ಮೀ ನಡೆದುಕೊಂಡು ಬಂದಿದ್ದಾರೆ.
ಉಮಾದೇವಿ ಮಗುವಿನ ಜೊತೆ 300 ಕಿಲೋ ಮೀಟರ್ ಗೂ ಅಧಿಕ ನಡೆದಿದ್ದಾರೆ. ತೆಲಂಗಾಣದ ನಾರಯಣಪೇಟೆಯ ನಿವಾಸಿಯಾದ ಮಹಿಳೆ ಏಳು ಜನರ ಜೊತೆ ಮುಂಬೈನಿಂದ ಕಾಲ್ನಡಿಗೆಯಲ್ಲಿ ಪ್ರಯಾಣ ಆರಂಭಿಸಿದ್ದರು. 300 ಕಿ.ಮೀ ನಡೆದುಕೊಂಡ ಬಂದ ಕಾರ್ಮಿಕರು ಕಲಬುರಗಿ ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು.
ವಲಸೆ ಕಾರ್ಮಿಕರು ಮತ್ತು ತಾಯಿಯನ್ನು ನೋಡಿದ ಕಮಲಾಪುರ ನಿವಾಸಿಗಳು ಆಹಾರ ಮತ್ತು ನೀರು ನೀಡಿ ಮಾನವೀಯತೆ ಮೆರೆದಿದ್ದಾರೆ. ಕಾರ್ಮಿಕರ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಸಮಸ್ಯೆಯನ್ನು ಆಲಿಸಿ, ನಾರಾಯಣಪೇಟೆಗೆ ತೆರಳಲು ಎಲ್ಲರಿಗೂ ವಾಹನದ ವ್ಯವಸ್ಥೆ ಕಲ್ಪಿಸಿದ್ದಾರೆ.
ಕೊರೊನಾ ಲಾಕ್ಡೌನ್ ನಿಂದಾಗಿ ಎಂಟು ಜನರು ಕಳೆದ ಒಂದು ತಿಂಗಳಿನಿಂದ ಮುಂಬೈನಲ್ಲಿ ಸಿಲುಕಿಕೊಂಡಿದ್ದರು. ತವರಿಗೆ ಸಾರಿಗೆ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಎಂಟು ಜನರು ಕಾಲ್ನಡಿಗೆ ಊರು ಸೇರಲು ತೀರ್ಮಾನಿಸಿ ಪ್ರಯಾಣ ಆರಂಭಿಸಿದ್ದರು. ಸದ್ಯ ಶಾಸಕ ಬಸವರಾಜ್ ಮತ್ತಿಮೂಡ್ ಈ ವಲಸೆ ಕಾರ್ಮಿಕರಿಗೆ ವಾಹನದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.